ಬೆಂಗಳೂರು: ರೌಡಿ ಸೈಲೆಂಟ್ ಸುನೀಲ್ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಬಿಜೆಪಿ ಮುಖಂಡರು ಪಾಲ್ಗೊಂಡಿದ್ದ ಹಿನ್ನೆಲೆಯಲ್ಲಿ 'ಬಿಜೆಪಿಯ ರೌಡಿಸಂ ರಾಜಕಾರಣ'ದ ವಿರುದ್ಧ ಅಭಿಯಾನ ಆರಂಭಿಸಿರುವ ಕಾಂಗ್ರೆಸ್, 2023ರ ಚುನಾವಣೆಗೆ ಬಿಜೆಪಿಯ 'ಸೋರಿಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ವೆಬ್ಸೈಟ್ ಬಿಡುಗಡೆ ಮಾಡಿದೆ.
ವೆಬ್ ಸೈಟ್ leakedbjp.comನಲ್ಲಿ ರೌಡಿಗಳಾದ ವಿಲ್ಸನ್ ಗಾರ್ಡನ್ ನಾಗ, ಸೈಲೆಂಟ್ ಸುನೀಲ್, ಬೆತ್ತನಗೆರೆ ಶಂಕರ್, ಫೈಟರ್ ರವಿ, ನಾರ್ವೆ ಸೋಮಶೇಖರ್ ಹಾಗೂ ರೌಡಿ ಶಿಟರ್ ಉಪ್ಪಿ ಭಾವಚಿತ್ರಗಳೊಂದಿಗೆ ಅವರ ಅಪರಾಧ ಹಿನ್ನೆಲೆಗಳನ್ನು ಉಲ್ಲೇಖಿಸಿದ್ದು, '2023ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಎಂದು ಲೇವಡಿ ಮಾಡಿದೆ.
'ಕೊನೆಯ ದಿನಗಳಲ್ಲಿ ಬಿಜೆಪಿಯ ಕಪಾಟಿನಿಂದ ಅಸ್ಥಿಪಂಜರಗಳು ಉರುಳುತ್ತಿರು ವಾಗ ಕಾಂಗ್ರೆಸ್, 2023ರ ಚುನಾವಣೆಯ ಪೂರ್ವದಲ್ಲಿ ಬಿಜೆಪಿ ಅನೌಪಚಾರಿಕತೆಯನ್ನು ಪ್ರದರ್ಶಿಸಲು ಸಂಪೂರ್ಣ ವೆಬ್ಸೈಟನ್ನು ಮೀಸಲಿಟ್ಟಿದೆ.
ಹೊಸ ವೆಬ್ಸೈಟ್ ಬೆಂಗಳೂರಿನ ರೌಡಿ ಶೀಟರ್ಗಳು ಮತ್ತು ಸ್ಲಂ ಲಾರ್ಡ್ಗಳನ್ನು ಬಿಜೆಪಿ ತನ್ನ ಕಾರ್ಯಕರ್ತರನ್ನಾಗಿ ಸೇರಿಸಿಕೊಳ್ಳುವ ಮೂಲಕ ರಾಜಕೀಯವನ್ನು ಹೇಗೆ ಅಪರಾಧೀಕರಿಸುತ್ತಿದೆ ಎಂಬುದರ ಕುರಿತು ವಿವರಗಳನ್ನು ಹೊಂದಿರುತ್ತದೆ' ಎಂದು ಕಾಂಗ್ರೆಸ್ ತಿಳಿಸಿದೆ.
ಬೆಂಗಳೂರು ನಗರದ ದೊಡ್ಡ ಕೊಳೆಗೇರಿಯೊಂದರಲ್ಲಿ ಸಂಸದ ತೇಜಸ್ವಿ ಸೂರ್ಯ ಗ್ಯಾಂಗ್ ಸ್ಟಾರ್ ಸೈಲೆಂಟ್ ಸುನೀಲ್ ಜೊತೆಗೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ, ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ರೌಡಿಶೀಟರ್ಗಳು ಬಿಜೆಪಿ ಸೇರುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ವಾರದಿಂದ ಬಿಜೆಪಿ ಸರಕಾರದ ಈ ಕ್ರಮವನ್ನು ವಿರೋಧಿಸುತ್ತಾ ಬರುತ್ತಿದೆ. ಬಿಜೆಪಿಯ ಜನಪ್ರತಿನಿಧಿಗಳು ರೌಡಿಗಳೊಂದಿಗೆ ನಿಕಟ ಸಂಬಧ ಹೊಂದಿದ್ದು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದನ್ನು ಕಾಂಗ್ರೆಸ್ ಖಂಡಿಸಿದೆ.