ಕಾರವಾರ: ನರೇಗಾ ಯೋಜನೆಯಡಿ ಆರಂಭಗೊಳ್ಳುತ್ತಿರುವ "ಕೂಸಿನ ಮನೆ"ಗೆ ಸಂಬಂಧಿಸಿದ ಕೆಲಸಗಳು ಶೀಘ್ರವಾಗಿ ಪೂರ್ಣಗೊಳ್ಳುವಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಕರೀಂ ಅಸಾದಿ ಅವರು ಅಧಿಕಾರಿಗಳಿಗೆ ತಿಳಿಸಿದರು.
ಅವರು ಇಂದು ಅಂಕೋಲಾ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ನರೇಗಾ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿ, ನರೇಗಾ ಕೂಲಿಕಾರರ ಮಕ್ಕಳ ಹಿತ ದೃಷ್ಟಿಯಿಂದ ಕೈಗೊಂಡಿರುವ ‘ಕೂಸಿನ ಮನೆ' ಶಿಶುಪಾಲನಾ ಕೇಂದ್ರಕ್ಕೆ ಸಂಬಂಧಿಸಿದಂತೆ ಮಕ್ಕಳ ಸಂಖ್ಯೆ, ಕಟ್ಟಡದ ಅಭಿವೃದ್ಧಿ, ಪೀಠೋಪಕರಣ ಹಾಗೂ ಆಟೋಪಕರಣಗಳ ವ್ಯವಸ್ಥೆ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಈ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹೆಚ್ಚಿನ ಹಿತಾಸಕ್ತಿ ವಹಿಸಿ ಯೋಜನೆಯ ಯಶಸ್ಸಿಗೆ ಕಾರಣವಾಗಬೇಕು ಎಂದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅನುಷ್ಠಾನ ಇಲಾಖೆಗಳು ಗ್ರಾಮ ಪಂಚಾಯತ್ ಜೊತೆಗೂಡಿ ಮಾನವದಿನಗಳ ಸೃಜನ ಹಾಗೂ ಕಾಮಗಾರಿಗಳ ಅಭಿವೃದ್ದಿಗೆ ಶ್ರಮಿಸಬೇಕು. ಕಾಮಗಾರಿ ಮುಕ್ತಾಯ, ಕಾಮಗಾರಿಗೆ ಸಂಬಂಧಿಸಿದ ದಾಖಲೆಗಳ ನಿರ್ವಹಣೆ, ಆರ್ಥಿಕ ವರ್ಷದÀ ಗುರಿ ಸಾಧನೆ ಇನ್ನಿತರ ವಿಷಯಗಳ ಕುರಿತು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಇನ್ನೂ ಉದ್ಯೋಗ ಖಾತ್ರಿ ಯೋಜನೆಯ ಸಾಮಾಜಿಕ ಪರಿಶೋಧನೆ, ಜಿಯೋಟ್ಯಾಗ್, ಎನ್ಎಮ್ಎಮ್ಎಸ್ ಆ್ಯಪ್, ಮಹಿಳಾ ಭಾಗವಹಿಸುವಿಕೆ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಉದ್ಯೋಗ ಚೀಟಿ ವಿತರಣೆ ಮತ್ತು ಕೆಲಸದಲ್ಲಿ ಪಾಲ್ಗೊಳ್ಳಲು ಪೆÇ್ರೀತ್ಸಾಹ ನೀಡುವಂತೆ ತಿಳಿಸಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ್ ಎಮ್ ಮಾತನಾಡಿ ಅನುಷ್ಠಾನ ಇಲಾಖೆಗಳು ನರೇಗಾ ಯೋಜನೆಯ ಕಾಮಗಾರಿಗೆ ಸಂಬಂಧಿಸಿದ ಯಾವುದೇ ಬೇಡಿಕೆಗಳಿದ್ದರೂ ತಾಲೂಕು ಪಂಚಾಯತ್ ಗಮನಕ್ಕೆ ತಂದು ಪರಿಹರಿಸಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ತಾಲೂಕು ಮಟ್ಟದ ಅನುಷ್ಠಾನ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ತಾಲೂಕು ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದರು.