ಕಾಂಗ್ರೆಸ್ ತ್ಯಜಿಸಿದ ಸಿಬಲ್ ರಾಜ್ಯಸಭೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ
ಲಕ್ನೋ/ಹೊಸದಿಲ್ಲಿ: ಕಳೆದ ವಾರ ಕಾಂಗ್ರೆಸ್ಗೆ ರಾಜೀನಾಮೆ ನೀಡಿರುವುದಾಗಿ ಘೋಷಿಸಿದ ಕಪಿಲ್ ಸಿಬಲ್, ರಾಜ್ಯಸಭೆ ಸ್ಥಾನಕ್ಕೆ ಸಮಾಜವಾದಿ ಪಕ್ಷ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ.
ಕೇಂದ್ರದ ಮಾಜಿ ಸಚಿವ ಸಿಬಲ್ ಅವರು ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್, ರಾಮ್ ಗೋಪಾಲ್ ಯಾದವ್ ಹಾಗೂ ಇತರ ಹಿರಿಯ ನಾಯಕರೊಂದಿಗೆ ಉತ್ತರಪ್ರದೇಶ ವಿಧಾನ ಸಭೆ ಆವರಣಕ್ಕೆ ತೆರಳಿ ನಾಮಪತ್ರ ಸಲ್ಲಿಸಿದರು.
ನಾನು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ಬೆಂಬಲಿಸಿರುವುದಕ್ಕೆ ಅಖಿಲೇಶ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ಸಿಬಲ್ ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. “ನಾನು ಕಾಂಗ್ರೆಸ್ಗೆ ಮೇ 16ರಂದು ರಾಜೀನಾಮೆ ನೀಡಿದ್ದೇನೆ. ನಾನು ಇನ್ನು ಮುಂದೆ ಕಾಂಗ್ರೆಸ್ನ ಹಿರಿಯ ನಾಯಕನಲ್ಲ' ಎಂದು ಅವರು ಹೇಳಿದರು.
ಕಾಂಗ್ರೆಸ್ ತ್ಯಜಿಸಿದ ಬಗ್ಗೆ ಸಿಬಲ್, “ನನಗೆ ಕಾಂಗ್ರೆಸ್ನೊಂದಿಗೆ ಆಳವಾದ ಸಂಬಂಧ ಇತ್ತು. ಅದು 30ರಿಂದ 31 ವರ್ಷಗಳ ಸಂಬಂಧ, ಇದು ಸಣ್ಣ ವಿಚಾರ ಅಲ್ಲ. ನಾನು ರಾಜೀವ್ (ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಕಾರಣಕ್ಕೆ ಕಾಂಗ್ರೆಸ್ ಸೇರಿದ್ದೆ. ನೀವು ಚಿಂತಿಸಬೇಕು, 31 ವರ್ಷಗಳ ಬಳಿಕ ಒಬ್ಬ ಕಾಂಗ್ರೆಸ್ ಅನ್ನು ತ್ಯಜಿಸಲು ಹೇಗೆ ಸಾಧ್ಯ. ಆದುದರಿಂದ ಇದರಲ್ಲಿ ಏನೋ ಇರಬೇಕು (ಪಕ್ಷ ತ್ಯಜಿಸಲು), ಕೆಲವು ಸಂದರ್ಭ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ'' ಎಂದರು.