ಭಟ್ಕಳ: ಮಾಜಿ ಸಂಸದರು ಸಂವಿಧಾನವನ್ನು ಬದಲಾಯಿಸಬೇಕು ಎಂದು ಬಾಯಿ ಬಿಟ್ಟು ಹೇಳುತ್ತಿದ್ದರೆ, ಈಗ ಬಿಜೆಪಿ ಅಭ್ಯರ್ಥಿಯಾಗಿರುವವರು ಸಂವಿಧಾನ ಬದಲಾಯಿಸುತ್ತೇವೆ ಎಂದು ಬಾಯಿ ಬಿಟ್ಟು ಹೇಳುವುದಿಲ್ಲ. ಆದರೆ, ಅವರ ಹೃದಯದಲ್ಲಿ ಬಾಬಾ ಸಾಹೇಬರು ಕೊಟ್ಟಿರುವ ಸಂವಿಧಾನವನ್ನು ಬದಾಯಿಸಬೇಕು ಎಂಬ ಮನಸ್ಸು ಅವರಿಗಿದೆ ಸಂವಿಧಾನ ಬದಲಾಯಿಸಬೇಕು ಎಂಬ ಒಂದೇ ಒಂದು ಕಾರಣಕ್ಕಾಗಿಯೇ ಅವರು ಇಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದರು.
ಭಟ್ಕಳ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಶನಿವಾರ ತಾಲೂಕಿನ ಬೆಳಕೆ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಲೋಕಸಭಾ ಚುನಾವಣೆಯ ಪೂರ್ವ ತಯಾರಿ ಹಾಗೂ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ಉ.ಕ. ಜಿಲ್ಲೆಯ ಉಸ್ತುವಾರಿ ಸಚಿವರು ಆಗಿದ್ದಾಗ ಕಾರವಾರ ಅಂಕೋಲಾ ಕಡೆಗೆ ಕಾಗೇರಿ ತಿರುಗಿ ನೋಡಲಿಲ್ಲ. ಆದ್ದರಿಂದ ವಿದ್ಯಾವಂತೆ, ವಿಚಾರವಂತೆ, ಬಡವರ, ರೈತರ, ಶ್ರಮಿಕರ ಕುರಿತು ಕಾಳಜಿ ಇರುವಂತೆ ಡಾ. ಅಂಜಲಿ ತಾಯಿವರಿಗೆ ನೀವು ಆಶೀರ್ವದಿಸಿದರೆ ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗಬಲ್ಲದು ಎಂದರು.
ಕಾಂಗ್ರೆಸ್ ಗ್ಯಾರಂಟಿಗಳನ್ನು ಟೀಕಿಸಿದ್ದ ಅಂದಿನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ್ ಕಟೀಲರವರು ಗ್ಯಾರಂಟಿಗಳನ್ನು ಕಾಂಗ್ರೆಸ್ ಈಡೇರಿಸಿದ್ದಲ್ಲಿ ತಲೆ ಬೋಳಿಸಿಕೊಳ್ಳುವುದಾಗಿ ಹೇಳಿದ್ದರು,ನಮ್ಮ ಕಾಂಗ್ರೆಸ್ ಸರಕಾರ ಬಂದ ತಕ್ಷಣವೇ ಜನತೆಗೆ ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ಈಡೇರಿಸಿ ಹಲವು ಬಗೆಯ ತಲೆ ಬೋಳಿಸಿಕೊಳ್ಳುವ ಪರಿಕರಗಳನ್ನು ಕಟೀಲ್ ಅವರಿಗೆ ಕಳುಹಿಸಿ ಕೊಟ್ಟಿದ್ದೇವೆ. ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಗುಡುಗಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಸಾಯಿ ಗಾಂವ್ಕರ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ನಾಯ್ಕ,ಮಾಜಿ ಜಿಪಂ ಉಪಾಧ್ಯಕ್ಷ ರಾಮು ಮೊಗೇರ್,ಮಾಜಿ ಜಿಪಂ ಸದಸ್ಯ ಆಲ್ಬರ್ಟ್ ಡಿಕೋಸ್ಟ,ಮಹಿಳಾ ಘಟಕದ ಅಧ್ಯಕ್ಷೆ ನಯನಾ ನಾಯ್ಕ,ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್, ನಾಮಧಾರಿ ಸಮಾಜದ ಮುಖಂಡರಾದ ಈರಪ್ಪ ಗರ್ಡಿಕರ್ ಹಾಗೂ ಕಾಂಗ್ರೆಸ್ ಪಕ್ಷದ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.