ಭಟ್ಕಳ: ಮುಸ್ಲಿಮ್ ಬಹುಸಂಖ್ಯಾತ ಸದಸ್ಯಬಲ ಹೊಂದಿರುವ ಭಟ್ಕಳ ಪುರಸಭೆ ಮುಸ್ಲಿಮರ ಹಿಡಿತದಲ್ಲಿದೆ ಎನ್ನುವ ತಪ್ಪುಕಲ್ಪನೆ ಎರಡೂ ಸಮುದಾಯಗಳಲ್ಲಿದ್ದು ಅದರಿಂದ ಹೊರಬರಬೇಕೆಂದು ನೂತನ ಅಧ್ಯಕ್ಷ ಮುಹಮ್ಮದ್ ಪರ್ವೇಝ್ ಕಾಶಿಮಜಿ ಹೇಳಿದರು.
ಅವರು ಹುರುಳಿಸಾಲ್ ಆಹ್ಮದ್ ಸಯೀದ್ ಜಾಮಿಯಾ ಮಸೀದಿಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಭಟ್ಕಳ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಭಟ್ಕಳ ನಗರ ವ್ಯಾಪ್ತಿಯಲ್ಲಿ ಮುಸ್ಲಿಮರು ಜನಸಂಖ್ಯೆಯಲ್ಲಿ ಹೆಚ್ಚಿದ್ದು ಸದಸ್ಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿ ಪುರಸಭೆಯನ್ನು ಪ್ರವೇಶಿಸುತ್ತಾರೆ ಎಂದ ಮಾತ್ರಕ್ಕೆ ಇದು ಮುಸ್ಲಿಮರ ಪುರಸಭೆ ಎಂದು ಪರಿಗಣಿಸುವುದು ತಪ್ಪು ಪುರಸಭೆಯಲ್ಲಿನ ಅಭಿವೃದ್ಧಿ ಕಾರ್ಯಗಳು ಯಾವುದೇ ಜಾತಿ, ಧರ್ಮ, ಒಂದು ವರ್ಗಕ್ಕೆ ಸೇರದೆ ಇಡೀ ನಗರಕ್ಕೆ ಸೇರಿದ್ದಾಗಿರುತ್ತದೆ. ಕೆಲವು ಇಂತಹ ತಲೆಬುಡವಿಲ್ಲದ ಮಾತುಗಳನ್ನಾಡುವುದರ ಮೂಲಕ ನಗರದ ಅಭಿವೃದ್ಧಿಗೆ ಹಿನ್ನೆಡಯನ್ನುಂಟು ಮಾಡುತ್ತಿದ್ದಾರೆ ಎಂದರು. ಭಟ್ಕಳದಲ್ಲಿ ಮೀನುಮಾರುಕಟ್ಟೆ ಸಮಸ್ಯೆಯಿದ್ದು ಇದನ್ನು ಎಲ್ಲ ಸಮುದಾಯದ ಮುಖಂಡರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು. ಮೂರು ವರ್ಷಗಳಿಂದ ಆಗದ ಕೆಲಸವನ್ನು ಕೇವಲ ಒಂದೆರಡು ತಿಂಗಳಲ್ಲಿ ಮಾಡುವುದು ಕಷ್ಟ, ಹಂತ ಹಂತವಾಗಿ ನಗರದ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಇದಕ್ಕೆ ಸಾರ್ವಜನಿಕರು ಸಹ ಕೈಜೋಡಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜ.ಇ.ಹಿಂ. ಭಟ್ಕಳ ಶಾಖಾಧ್ಯಕ್ಷ ಇಂಜಿನೀಯರ್ ನಝೀರ್ ಆಹ್ಮದ್ ಖಾಝಿ, ಮಾನವ ಸೇವೆ ಶ್ರೇಷ್ಠ ಕಾರ್ಯವಾಗಿದ್ದು ಇದರಲ್ಲಿ ಯಾವುದೇ ಜಾತಿ, ಧರ್ಮ ಗಣನೆಗೆ ಬಾರದು. ಪ್ರವಾದಿ ಮುಹಮ್ಮದ್(ಸ) ರು ತಮ್ಮ ಬದುಕಿನುದ್ದಕ್ಕೂ ಮನುಷ್ಯರ ಸೇವೆಗೆ ಹೆಚ್ಚಿನ ವiಹತ್ವ ನೀಡಿದ್ದರು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪುರಸಭೆಯ ಉಪಾಧ್ಯಕ್ಷ ಖೈಸರ್ ಮೊಹತೆಶಮ್, ಅನುಭವಿ ಅಧ್ಯಕ್ಷರೊಂದಿಗೆ ಕೆಲಸ ಮಾಡುವ ಸೌಭಾಗ್ಯ ದೊರಕಿದೆ. ಇಬ್ಬರೂ ಸೇರಿ ಭಟ್ಕಳದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಗಿತ್ರೀಫ್ ರಿದಾ ಮಾನ್ವಿ ಕುರಾನ್ ಪಠಣದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಉಪಾಧ್ಯಕ್ಷ ಮುಜಾಹಿದ್ ಮುಸ್ತಫಾ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅಬ್ದುಲ್ ರವೂಫ್ ಸವಣೂರು ಕಾರ್ಯಕ್ರಮ ನಿರೂಪಿಸಿದರು. ಮುಹಮ್ಮದ್ ಯೂನೂಸ್ ರುಕ್ನುದ್ದೀನ್ ಧನ್ಯವಾದ ಅರ್ಪಿಸಿದರು.