ಕಾರವಾರ: ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಚತಾ ಅಭಿಯಾನ-2019 ಅಂಗವಾಗಿ ಭಾರತೀಯ ಕರಾವಳಿ ಭದ್ರತಾ ಪಡೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸೆಪ್ಟೆಂಬರ್ 21ರಂದು ಬೆಳಿಗ್ಗೆ 7.30ಕ್ಕೆ ಕಾರವಾರದ ರವೀಂದ್ರನಾಥ್ ಟ್ಯಾಗೋರ್ ಕಡಲತೀರದಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಡಲತೀರದಲ್ಲಿ ಆಗುವ ವಿವಿಧ ಮಾಲಿನ್ಯದಿಂದ ಜಲಚರಗಳ ಮೇಲೆ ಬೀರುವ ಪ್ರತೀಕೂಲ ಪರಿಣಾಮ ಹಾಗೂ ಕಡಲತೀರಗಳನ್ನು ಸ್ವಚ್ಚವಾಗಿಡಬೇಕೆಂಬ ಕುರಿತು ಜಾಗೃತಿಯ ಉದ್ದೇಶದಿಂದ ದೇಶದ ವಿವಿಧ ಕಡಲತೀರಗಳಲ್ಲಿ ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಚತಾ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದ್ದು ಸೆಪ್ಟೆಂಬರ್ 21ರಂದು ಕಾರವಾರದ ಕಡಲತೀರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಕರಾವಳಿ ಭದ್ರತಾ ಪಡೆಯ ಸಹಾಯಕ ಕಮಾಂಡೆಂಟ್ ಶುಬ್ರ ಘೋಷ್ ತಿಳಿಸಿದ್ದಾರೆ.
ಕಡಲತೀರಗಳನ್ನು ಸ್ವಚ್ಚವಾಗಿಡಬೇಕೆಂಬ ಘೋಷಣೆಯೊಂದಿಗೆ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲೆ ಜಿಲ್ಲಾಡಳಿತ, ಮೀನುಗಾರಿಕೆ ಇಲಾಖೆ, ಬಂದರು ಇಲಾಖೆ, ನಗರಸಭೆ, ಕಾರವಾರದ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅವರು ಕೋರಿದ್ದಾರೆ.