ಕಾರವಾರ: ಅಂಕೋಲ ತಾಲೂಕಿನ ಅವರ್ಸಾ ಗ್ರಾಮ ಪಂಚಾಯತ್ನಲ್ಲಿ ದುಡಿಯುವ ಕೈಗಳಿಗೆ ನೆರವಾಗುವ ಉದ್ಯೋಗ ಖಾತರಿ ಯೋಜನೆ ಕೇವಲ ಕೆಲವು ಕೈಗಳಿಗೆ ಸಿಮೀತವಾಗಿರದೇ ಪ್ರತಿಯೊಂದು ಮನೆ ಬಾಗಿಲಿಗೆ ತಲುಪಬೇಕು ಎಂಬ ಉದ್ದೇಶದಿಂದ "ನರೇಗಾ ಮಾಹಿತಿ ವಿನಿಮಯ" ಕಾರ್ಯಕ್ರಮ ಕೈಗೊಳ್ಳಲಾಯಿತು.
ನರೇಗಾ ಯೋಜನೆಯಡಿ ಕೂಲಿಕಾರರು, ರೈತರು ಹಾಗೂ ಸಾಮಾನ್ಯ ಜನರಿಗೆ ಸಿಗುವ ಸೌಲಭ್ಯಗಳ ಕುರಿತು ಸಾರ್ವಜನಿಕರಿಗೆ ಮನದಟ್ಟು ಮಾಡುವ ನಿಟ್ಟಿನಲ್ಲಿ ಮಾಹಿತಿ ಕಾರ್ಯಾಗಾರ ಕೈಗೊಂಡು ಖಾತರಿ ಯೋಜನೆ ಉದ್ದೇಶ, ಸೌಲಭ್ಯಗಳು, ದಿನಗೂಲಿ, ವೈಯಕ್ತಿಕ ಕಾಮಗಾರಿಗಳಿಗೆ ಜೀವಿತಾವಧಿಗೆ ನೀಡುವ ಸಹಾಯಧನದ ಮೊತ್ತ ಇತರ ವಿಷಯಗಳ ಕುರಿತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೀತಾ ಮೇತ್ರಿ ಹಾಗೂ ಐಇಸಿ ಸಂಯೋಜಕರಾದ ಪೂರ್ಣಿಮಾ ಮಾಹಿತಿ ನೀಡಿದರು.
ಉದ್ಯೋಗ ಖಾತರಿ ಯೋಜನೆಯ ಕೆಲಸದ ಸ್ಥಳದಲ್ಲಿ ನೀರು ಮತ್ತು ನೆರಳಿನ ವ್ಯವಸ್ಥೆಯೊಂದಿಗೆ 60 ವರ್ಷ ಮೇಲ್ಪಟ್ಟವರು, ವಿಕಲಚೇತನರು, ಗರ್ಭಿಣಿಯರು, ಬಾಣಂತಿಯರು ಸಹ ಅರ್ಧ ಕೆಲಸದೊಂದಿಗೆ ಪೂರ್ತಿ ಸಂಬಳ ಪಡೆಯಬಹುದಾಗಿದೆ ಎಂಬುದನ್ನು ಮನದಟ್ಟು ಮಾಡಲಾಯಿತು. ಇನ್ನೂ ಈ ವೇಳೆ ನರೇಗಾ ಯೋಜನೆಯ ಮಾಹಿತಿಯುಳ್ಳ ಕರಪತ್ರಗಳನ್ನು ಹಂಚಿ ನಿಮಗೆ ಅವಶ್ಯವಿರುವ ಕಾಮಗಾರಿಗಳನ್ನು ಪಡೆದು ಸ್ವಾವಲಂಬನೆಯ ಜೀವನಕ್ಕೆ ಸಾಕ್ಷಿಯಾಗಿ ಇತರರಿಗೆ ಮಾದರಿಯಾಗಲು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಮಹಿಳಾ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು, ಎನ್ಆರ್ಎಲ್ಎಮ್ ಸಿಬ್ಬಂದಿಗಳು, ಶಾಲಾ ಶಿಕ್ಷಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದರು.