ಭಟ್ಕಳ: ಶಿಕ್ಷಣದ ಜೊತೆಗೆ ಶಿಸ್ತು ಮತ್ತು ಸಂಸ್ಕಾರ ಸೇರಿದಾಗ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ಭಟ್ಕಳ ಎಜುಕೇಶನ್ ಟ್ರಸ್ಟಿನ ಅಧ್ಯಕ್ಷ ಡಾ. ಸುರೇಶ ನಾಯಕ ಹೇಳಿದರು.
ಅವರು ಭಟ್ಕಳದ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ್ ಪಿಯು ಕಾಲೇಜಿನ “ಸಾಧನಾ” ಎನ್ನುವ ವಾರ್ಷಿಕೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ವಿದ್ಯಾರ್ಥಿಗಳಿಗೆ ಅಂಕಗಳ ಜೊತೆಗೆ ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅತ್ಯಂತ ಮುಖ್ಯವಾಗಿದ್ದು, ಇಂದು ಬಹುಮಾನ ಪಡೆಯಲಿರುವ ಎಲ್ಲರೂ ಜೀವನದಲ್ಲಿ ಸಾಧಿಸುವವರಿದ್ದೀರಿ ಎಂದು ಹೇಳಿದರು.
ವಿದ್ಯಾಂಜಲಿ ಪಬ್ಲಿಕ್ ಶಾಲೆಯ ಮುಖ್ಯಾಧ್ಯಾಪಕಿ ಶೈಲಜಾ ಪ್ರಭು ಉಪಸ್ಥಿತರಿದ್ದರು. ಪ್ರಾಂಶುಪಾಲ ಡಾ. ವಿರೇಂದ್ರ ವಿ. ಶಾನಭಾಗ ವಾರ್ಷಿಕ ವರದಿ ವಾಚಿಸಿದರು. ಅತ್ಯುತ್ತಮ ವಿದ್ಯಾರ್ಥಿಯಾಗಿ ಕಲಾ ವಿಭಾಗದಲ್ಲಿ ಪೂಜಾ ಖಾರ್ವಿ, ವಾಣಿಜ್ಯ ಸಂಖ್ಯಾಶಾಸ್ತç ವಿಭಾಗದಲ್ಲಿ ಅರ್ಜುನ್ ಆರ್.ಬಿ., ವಾಣಿಜ್ಯ ಗಣಕವಿಜ್ಞಾನ ವಿಭಾಗದಲ್ಲಿ ಸನತ್ ಕಿಣಿ ಮತ್ತು ವಿಜ್ಞಾನ ವಿಭಾಗದಲ್ಲಿ ಹರ್ಷಿತಾ ನಾಯ್ಕ ಬಹುಮಾನ ಸ್ವೀಕರಿಸಿದರೆ ಮಹಾವಿದ್ಯಾಲಯದ ಅತ್ಯುತ್ತಮ ವಿದ್ಯಾರ್ಥಿಯಾಗಿ ಸಂದೇಶ ಆಚಾರ್ಯ ಆಯ್ಕೆಯಾದರು.
ವಿದ್ಯಾರ್ಥಿಗಳಾದ ಶ್ರೀರಕ್ಷಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಸಂಕೇತ ನಾಯ್ಕ ಸ್ವಾಗತಿಸಿದರು. ಅನನ್ಯ ನಾಯ್ಕ ವಂದಿಸಿದರು. ತಿಲಕ ಹೆಬ್ಬಾರ ಮತ್ತು ಭಾವನಾ ನಾಯ್ಕ ನಿರೂಪಿಸಿದರು. ನಂತರ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ ನಡೆಯಿತು.