ಭಟ್ಕಳ : ತೆಂಗಿನಗುಡಿ ಬಂದರನಲ್ಲಿ ಹಾಕಲಾಗಿದ್ದ ವೀರ ಸಾರ್ವಕರ ನಾಮಫಲಕವನ್ನು ಗ್ರಾಮ ಪಂಚಾಯ್ತಿ ಅಧಿಕಾರಿಗಳು ತೆರವುಗೊಳಿಸಿರುವುದನ್ನು ಖಂಡಿಸಿ ಮಂಗಳವಾರ ಹೆಬಳೆ ಗ್ರಾಮ ಪಂಚಾಯ್ತಿಯ ಬಿಜೆಪಿ ಸದಸ್ಯರು ಗ್ರಾಮ ಪಂಚಾಯ್ತಿ ಎದುರು ಧರಣಿ ಕೂತು ಪಂಚಾಯ್ತಿ ವ್ಯಾಪ್ತಿಯಲ್ಲಿನ ಅನಧೀಕೃತ ಎಲ್ಲಾ ನಾಮಫಲಕ ಹಾಗೂ ಕಟ್ಟಡವನ್ನು ತೆರವುಗೊಳಿಸುವಂತೆ ಆಗ್ರಹಿಸಿದರು.
ಹೆಬಳೆ ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಹಾಗೂ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಸುಬ್ರಾಯ ದೇವಾಡಿಗ ಮಾತನಾಡಿ ತೆಂಗಿನಗುಡಿ ಬಂದರಿಗೆ ವೀರ ಸಾರ್ವಕರ ಹೆಸರಿಡುವಂತೆ 2022ರಲ್ಲಿ ಸಾರ್ವಜನಿಕರು ನೀಡಿದ ಮನವಿಯನ್ನು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ 30 ಸದಸ್ಯರು ಅನುಮೋದನೆ ನೀಡಿದ್ದಾರೆ. ಆದರೆ ಇದಕ್ಕೆ ಅಂದಿನ ಪಿ.ಡಿ.ಒ ಹಿಂಬರಹ ನೀಡದ ಕಾರಣ ನಾಮಫಲಕ ಹಾಕಲು ಅನುಮತಿ ಪಡೆದುಕೊಂಡಿರಲಿಲ್ಲ. ವೀರ ಸಾರ್ವಕರ ನಾಮಫಲಕ ತೆರವು ಮಾಡುವಂತೆ ಯಾವುದೇ ಲಿಖಿತ ದೂರುಗಳು ಪಂಚಾಯ್ತಿಗೆ ಬರದೇ ಇದ್ದರೂ ಅಧಿಕಾರಿಗಳು ಸ್ಥಳೀಯ ಸದಸ್ಯರ ಗಮನಕ್ಕೆ ತರದೇ ಏಕಾಎಕಿ ಜೆ.ಸಿ.ಬಿ ತಂದು ತೆರವು ಮಾಡಿದ್ದಾರೆ. ಆಡಳಿತ ಸದಸ್ಯರ ಹಾಗು ಅಧ್ಯಕ್ಷರ ವಿರೊಧದ ನಡುವೆಯೂ ಪಿ.ಡಿ.ಒ ಯಾರ ಒತ್ತಡಕ್ಕೆ ಮಣಿದು ನಾಮಫಲಕ ತೆರವು ಮಾಡಿದರೂ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಗ್ರಾಮ ಪಂಚಾಯ್ತಿಯ ವ್ಯಾಪ್ತಿಯಲ್ಲಿ ಹಾಕಲಾಗಿರುವ ಎಲ್ಲಾ ಅನಧಿಕೃತ ನಾಮಫಲಕವನ್ನು ತೆರವು ಮಾಡುವಂತೆ ನಾವು ಎರಡು ದಿವಸ ಹಿಂದಯೇ ಲಿಖಿತವಾಗಿ ದೂರು ನೀಡಿದರೂ ಪಿ.ಡಿ.ಓ ಏಕೆ ಕ್ರಮಕ್ಕೆ ಮುಂದಾಗುತ್ತೀಲ್ಲ ಎಂದು ಪ್ರಶ್ನಿಸಿದರು.
ಉತ್ತರ ಕನ್ನಡ ಜಿಲ್ಲಾ ಬಿಜೆಪಿ ಸಂಚಾಲಕ ಗೋವಿಂದ ನಾಯ್ಕ ಮಾತನಾಡಿ ಏಕಾಎಕಿ ಸದಸ್ಯರ ಗಣನೆಗೆ ತೆಗೆದುಕೊಳ್ಳದೇ ನಾಮಫಲಕ ತೆರವು ಮಾಡಿರುವುದಕ್ಕೆ ಪಿಡಿಒ ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.