ಬೆಂಗಳೂರು: ಕರ್ನಾಟಕ ರಾಜ್ಯದ ಮಾನ್ಯ ರಾಜ್ಯಪಾಲರು ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ನಾಡಿನ ಸಮಸ್ತ ಜನತೆಗೆ 75ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಹೃತೂರ್ವಕ ಶುಭಾಶಯಗಳನ್ನು ಕೋರಿ ನಂತರ ಜನತೆಯನ್ನು ಉದ್ದೇಶಿಸಿ ಭಾಷಣ ಮಾಡಿದರು.
ಈ ಐತಿಹಾಸಿಕ ದಿನದಂದು ಭಾರತದ ಸಂವಿಧಾನವು ಜಾರಿಗೆ ಬಂದಿತು. ಸಂವಿಧಾನವು ಭಾರತದ ನಾಗರೀಕರಿಗೆ ನ್ಯಾಯ, ಸ್ವಾತಂತ್ರ್ಯ ಹಾಗೂ ಸಮಾನತೆಯ ಅವಕಾಶವನ್ನು ಒದಗಿಸುವುದರೊಂದಿಗೆ, ದೇಶದ ಸಮಗ್ರತೆ, ಏಕತೆಯನ್ನು ಕಾಪಾಡುವ ಜೊತೆಗೆ ಸ್ವಾಭಿಮಾನದ ಜೀವನ ಒದಗಿಸುವ ಧೈಯವನ್ನು ಹೊಂದಿದೆ. ಆ ಮೂಲಕ ನಾಗರೀಕರು ತಮ್ಮ ಏಳಿಗೆಯೊಂದಿಗೆ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಲು ಅವಕಾಶ ಕಲ್ಪಿಸಿದೆ. ಸಂವಿಧಾನದ ಈ ಆಶಯಗಳನ್ನು ಸಾಕಾರಗೊಳಿಸಲು ನನ್ನ ಸರ್ಕಾರ ಶ್ರಮಿಸುತ್ತಿದೆ.
ನನ್ನ ಸರ್ಕಾರವು ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿತ್ತು. ಅದರಂತೆ, ಎಲ್ಲಾ ಐದು ಗ್ಯಾರಂಟಿಗಳಾದ ಶಕ್ತಿಯೋಜನೆ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ ಮತ್ತು ಯುವನಿಧಿ ಯೋಜನೆಗಳನ್ನು ನಾವು ರಾಜ್ಯದಲ್ಲಿ ಅನುಷ್ಠಾನಗೊಳಿಸಿರುತ್ತೇವೆ ಎಂದು ಹರ್ಷಿಸುತ್ತೇನೆ ಎಂದು ತಿಳಿಸಿದರು.
ಜೂನ್ 11 2023, ರಂದು ಮಹತ್ವಾಕಾಂಕ್ಷಿ ಯೋಜನೆಯಾದ "ಶಕ್ತಿ ಯೋಜನೆ"-"ಮಹಿಳೆಯರಿಗೆ ಉಚಿತ ಪ್ರಯಾಣ"ವನ್ನು ಜಾರಿಗೊಳಿಸಿ ಮಹಿಳಾ ಸಬಲೀಕರಣದತ್ತ ಹೊಸ ಹೆಜ್ಜೆಯಿಟ್ಟಿದೆ. ಲಿಂಗತ್ವ ಅಲ್ಪಸಂಖ್ಯಾತರು, ವಿದ್ಯಾರ್ಥಿನಿಯರು ಸೇರಿದಂತೆ, ರಾಜ್ಯದ 3.5 ಕೋಟಿ ಮಹಿಳೆಯರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಈ ಯೋಜನೆ ಪ್ರಾರಂಭವಾದಂದಿನಿಂದ ಇಲ್ಲಿಯವರೆಗೆ 134.34 ಕೋಟಿ ಮಹಿಳಾ ಪ್ರಯಾಣಿಕರು ಶಕ್ತಿಯೋಜನೆಯಡಿ ಪ್ರಯಾಣ ಮಾಡಿದ್ದಾರೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ವಿತರಿಸಲಾಗುವ 5ಕೆ.ಜಿ ಆಹಾರ ಧಾನ್ಯದೊಂದಿಗೆ ಹೆಚ್ಚುವರಿಯಾಗಿ 5ಕೆ.ಜಿ ಆಹಾರ ಧಾನ್ಯವನ್ನು ಸೇರಿಸಿ ಪ್ರತಿ ಫಲಾನುಭವಿಗೆ 10ಕೆ.ಜಿ ಆಹಾರಧಾನ್ಯವನ್ನು ವಿತರಿಸಲು ರಾಜ್ಯ ಸರ್ಕಾರವು ಬದ್ಧವಾಗಿದೆ. ಪ್ರಸ್ತುತ ಈ ಯೋಜನೆಗೆ ಅಗತ್ಯವಿರುವ ಆಹಾರ ಧಾನ್ಯ ಲಭ್ಯವಾಗುವವರೆಗೆ ರಾಜ್ಯದ ಅರ್ಹ ಪ್ರತಿ ಫಲಾನುಭವಿಗೆ ಪ್ರತಿ ತಿಂಗಳು ಹೆಚ್ಚುವರಿ 5ಕೆ.ಜಿ ಆಹಾರ ಧಾನ್ಯದ ಬದಲಾಗಿ ಪ್ರತಿ ಕೆ.ಜಿಗೆ ರೂ.34/-ರಂತೆ ಕುಟುಂಬದ ಸದಸ್ಯರುಗಳ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ವರ್ಗಾಯಿಸಲಾಗುತ್ತಿದೆ. ಜುಲೈ 2023 ಮಾಹೆಯಿಂದ ನವೆಂಬರ್ 2023ರ ಅಂತ್ಯಕ್ಕೆ ಒಟ್ಟು ರೂ.2900.12 ಕೋಟಿ ಮೊತ್ತದ ಹಣವನ್ನು ಅರ್ಹ ಫಲಾನುಭವಿಗಳಿಗೆ ವರ್ಗಾಯಿಸಲಾಗಿದೆ.
ದಿನಾಂಕ: 01.07.2023ರಿಂದ ಜಾರಿಗೆ ಬರುವಂತೆ "ಗೃಹಜ್ಯೋತಿ" ಯೋಜನೆಯನ್ನು ಜಾರಿಗೊಳಿಸಿ, ರಾಜ್ಯದ ಪ್ರತಿ ಮನೆಗೆ ಪ್ರತಿ ತಿಂಗಳಿಗೆ 200 ಯೂನಿಟ್ಗಳ ಗರಿಷ್ಠ ಬಳಕೆಯ ಮಿತಿಗೆ ಒಳಪಟ್ಟು ಉಚಿತ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ನಾಡಿನ 1.50ಕೋಟಿ ಗ್ರಾಹಕರು ಯೋಜನೆಯ ಸದುಪಯೋಗ ಪಡೆಯುತ್ತಿದ್ದು, ಸರ್ಕಾರವು ಪ್ರತಿ ತಿಂಗಳೂ ಮುಂಗಡವಾಗಿ ಎಲ್ಲಾ ಎಸ್ಕಾಂಗಳಿಗೆ ರೂ.700 ಕೋಟಿಗಳ ಸಹಾಯಧನವನ್ನು ಬಿಡುಗಡೆ ಮಾಡುತ್ತಿದೆ.
ರಾಜ್ಯದಲ್ಲಿರುವ ಪುತಿ ಕುಟುಂಬದಲ್ಲಿನ ಅರ್ಹ ಯಜಮಾನಿಗೆ ಪ್ರತಿ ತಿಂಗಳು ರೂ.2,000/- ಗಳನ್ನು ನೀಡುವ “ಗೃಹಲಕ್ಷ್ಮಿ" ಯೋಜನೆಯಡಿ ರೂ 17500 ಕೋಟಿ ಅನುದಾನವನ್ನು ನಿಗದಿ ಪಡಿಸಲಾಗಿದೆ. ಈ ಯೋಜನೆಯಡಿ ನೋಂದಾಯಿಸಿ ಕೊಂಡಿರುವ 1.17 ಕೋಟಿ ಮಹಿಳಾ ಫಲಾನುಭವಿಗಳಿಗೆ ಡಿಬಿಟಿ ಮೂಲಕ ಈವರೆಗೆ ರೂ.8181.00 ಕೋಟಿ ನೆರವು ವರ್ಗಾಯಿಸಲಾಗಿದೆ.
"ಯುವನಿಧಿ ಯೋಜನೆಯಡಿ 2022-23 ಸಾಲಿನಲ್ಲಿ ಉತ್ತೀರ್ಣರಾದ ಪದವೀಧರರು ಮತ್ತು ಡಿಪ್ಲೋಮಾ ಹೊಂದಿದವರು 180 ದಿನಗಳು ಪೂರ್ಣಗೊಂಡರೂ ಉದ್ಯೋಗವನ್ನು ಪಡೆಯದೆ ಇದ್ದರೆ ಕ್ರಮವಾಗಿ ಮಾಸಿಕ ರೂ.3000/- ಮತ್ತು ರೂ.1500/- ಗಳ ನಿರುದ್ಯೋಗ ಭತ್ಯೆಯನ್ನು ಎರಡು ವರ್ಷದ ಅವಧಿಗೆ ಅಥವಾ ಎರಡು ವರ್ಷದೊಳಗೆ ಉದ್ಯೋಗ ಪಡೆಯುವವರೆಗೆ ಪಾವತಿಸಲು ಸರ್ಕಾರಿ ಆದೇಶ ಹೊರಡಿಸಲಾಗಿದೆ. ಈ ಯೋಜನೆಯನ್ನು ಸ್ವಾಮಿ ವಿವೇಕಾನಂದ ಜಯಂತಿಯಂದು ರಾಷ್ಟ್ರೀಯ ಯುವ ದಿನಾಚರಣೆ ಸಂದರ್ಭದಲ್ಲಿ ಅನುಷ್ಠಾನಗೊಳಿಸಲಾಗಿದೆ.
ಹೀಗಾಗಿ, ನನ್ನ ಸರ್ಕಾರವು ನೀಡಿದ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ, ಬದ್ಧತೆಯನ್ನು ಮೆರೆದಿದೆ.
ಬರ ಕೈಪಿಡಿ 2020 ರಲ್ಲಿ ನಿರೂಪಿಸಲಾದ ನಿಯಮಗಳು ಮತ್ತು ಕಾರ್ಯವಿಧಾನಗಳ ಪ್ರಕಾರ, ರಾಜ್ಯದ 236 ತಾಲ್ಲೂಕುಗಳ ಪೈಕಿ, 223 ತಾಲ್ಲೂಕುಗಳನ್ನು ಬರ ಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದ್ದು, ಅದರಲ್ಲಿ 196 ತಾಲ್ಲೂಕುಗಳನ್ನು ತೀವು ಬರ ಪೀಡಿತ ಎಂದು ವರ್ಗೀಕರಿಸಲಾಗಿದೆ. 195 ಬರ ಪೀಡಿತ ತಾಲ್ಲೂಕುಗಳಲ್ಲಿ ಬರ ಪರಿಹಾರ ಮತ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರವು NDRF ನಿಂದ ಅನುದಾನವನ್ನು ಕೋರಿದೆ.
ರೈತರ ಸಂಕಷ್ಟವನ್ನು ನಿವಾರಿಸಲು ಬರಗಾಲ ಘೋಷಿತ ತಾಲ್ಲೂಕುಗಳಲ್ಲಿ ಪ್ರತಿ ರೈತನಿಗೆ ರೂ.2000/- ವರೆಗಿನ ಇನ್ಪುಟ್ ಸಬ್ಸಿಡಿಯನ್ನು ಮಧ್ಯಂತರ ಪರಿಹಾರವಾಗಿ ಆಧಾರ್ ಲಿಂಕ್ ಮಾಡಲಾದ ರೈತರ ಬ್ಯಾಂಕ್ ಖಾತೆಗೆ రాజ్య ಸರ್ಕಾರದಿಂದ ನೇರವಾಗಿ ಬಿಡುಗಡೆ ಮಾಡಲಾಗುತ್ತಿದೆ. ಸುಮಾರು 30 ಲಕ್ಷ ರೈತರಿಗೆ ರೂ.580 ಕೋಟಿ ಬಿಡುಗಡೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.