ಹೊಳೆಹೊನ್ನೂರಿನಲ್ಲಿ ಗಾಂಧೀಜಿ ಪ್ರತಿಮೆ ಧ್ವಂಸ ಪ್ರಕರಣ;ಇಬ್ಬರ ಬಂಧನ
ಶಿವಮೊಗ್ಗ: ಹೊಳೆಹೊನ್ನೂರಿನಲ್ಲಿ ಗಾಂಧೀಜಿ ಪ್ರತಿಮೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಶಿವಮೊಗ್ಗ ಎಸ್ಪಿ ಜಿ.ಕೆ. ಮಿಥುನ್ ಕುಮಾರ್ ತಿಳಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ಸಮೀಪದ ಪಂಡ್ರಹಳ್ಳಿಯ ಗಣೇಶ್ ಮತ್ತು ವಿನಯ್ ಬಂಧಿತ ಆರೋಪಿಗಳು. ಮೂರು ದಿನದ ಹಿಂದೆ ನಡೆದಿದ್ದ ಘಟನೆಯ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗೆ ಮೂರು ತಂಡ ರಚಿಸಲಾಗಿತ್ತು. ಸುಮಾರು 50 ಪೊಲೀಸ್ ಸಿಬ್ಬಂದಿ ತಂಡದಲ್ಲಿದ್ದರು ಎಂದು ಮಾಹಿತಿ ನೀಡಿದರು.
ಚಿತ್ರದುರ್ಗದಿಂದ ಜೋಗಕ್ಕೆ ಹೋಗುವ ಮಾರ್ಗದಲ್ಲಿ ಆರೋಪಿಗಳು ಈ ಕೃತ್ಯ ನಡೆಸಿದ್ದಾರೆ. ಪ್ರತಿಮೆ ಧ್ವಂಸ ಮಾಡಿದ ನಂತರ ಶಿವಮೊಗ್ಗಕ್ಕೆ ಹೋಗಿ ವಾಪಸ್ ಹಳ್ಳಿಗೆ ಹೋಗಿದ್ದರು ಎಂದು ಹೇಳಿದರು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ವಿಚಾರಣೆ ವೇಳೆ ಇನ್ನಷ್ಟು ವಿಷಯ ತಿಳಿದು ಬರಲಿದೆ. ತಾಂತ್ರಿಕ ಹಾಗೂ ಸ್ಥಳೀಯ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದ ಎಸ್ಪಿ, ಪ್ರತಿಮೆ ಮರು ಸ್ಥಾಪನೆ ಸಂಬಂಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಭದ್ರಾವತಿ ಉಪ ವಿಭಾಗ ಡಿವೈಎಸ್ಪಿ ಹಾಗೂ ಸಿಎನ್ಎನ್ ಠಾಣೆ ಇನ್ ಸ್ಪೆಕ್ಟರ್ ದೀಪಕ್ ಉಪಸ್ಥಿತರಿದ್ದರು.