ಬೆಂಗಳೂರು: ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯ ರಸ್ತೆ ಸಾರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ 'ಶಕ್ತಿ' ಯೋಜನೆಗೆ ಜೂ.11ರಂದು ರಾಜ್ಯಾದ್ಯಂತ ಏಕಕಾಲಕ್ಕೆ ಚಾಲನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದು, ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರಿಗೆ ಸೂಚನೆ ನೀಡಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಐದು ಪ್ರಮುಖ ಗ್ಯಾರಂಟಿಗಳಲ್ಲಿ ಮೊದಲ ಗ್ಯಾರಂಟಿ ಜೂ.11ಕ್ಕೆ ಸಮಸ್ತ ಕನ್ನಡಿಗರಿಗೆ ಸಮರ್ಪಣೆ ಆಗಲಿದೆ. ನಾಡಿನ ಅರ್ಧದಷ್ಟಿರುವ ಮಹಿಳಾ ಸಮೂಹದ ಪಾಲಿನ 'ಶಕ್ತಿ' ಯೋಜನೆ ಅನುಷ್ಠಾನಕ್ಕೆ ಬರಲಿದೆ.
ಕೇಂದ್ರ ಸರಕಾರದ ಬೆಲೆ ಏರಿಕೆ, ಹಣದುಬ್ಬರದ ಕಾರಣಕ್ಕೆ ಸಂಕಷ್ಟಕ್ಕೆ ತುತ್ತಾ ಗಿರುವ ನಾಡಿನ ಮಹಿಳಾ ಸಮೂಹಕ್ಕೆ ಕೊಂಚ ನಿರಾಳತೆ ನೀಡುವ ಶಕ್ತಿ ಯೋಜನೆಯ ಚಾಲನೆ ಅತ್ಯಂತ ಅರ್ಥ ಪೂರ್ಣವಾಗಿ ನಡೆಸಬೇಕು, ಸರಕಾರ ತನ್ನ ಮೇಲೆ ಬೀಳುವ ಆರ್ಥಿಕ ಹೊರೆಯ ಹೊರತಾಗಿಯೂ ಜನ ಕಲ್ಯಾಣಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಅಸ್ತಿತ್ವಕ್ಕೆ ಬಂದ ತಿಂಗಳ ಒಳಗೆ ಜಾರಿಗೆ ತರುತ್ತಿದೆ.