ಮುಂಡಗೋಡ: ಪ್ರಸ್ತುತ ದಿನಮಾನದಲ್ಲಿ ಸನಾತನ ಸಂಸ್ಕøತಿ, ಜಾನಪದ ಕಲೆ ಅವನತಿಯತ್ತ ಸಾಗಿದೆ ಅವುಗಳನ್ನು ನೆನಪಿಸಿಕೊಡುವ ಕಾಲ ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಅವರು ಭಾನುವಾರ ಸಂಜೆ ತಾಲೂಕಿನ ಮುಡಸಾಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸುಗ್ಗಿ-ಹುಗ್ಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಯುವಜನಾಂಗ ಮೊಬೈಲ್ನತ್ತ ಹೆಚ್ಚು ಮಾರು ಹೋಗುತ್ತಿದೆ. ತಂದೆ-ತಾಯಂದಿರು ತಮ್ಮ ಮಕ್ಕಳಿಗೆ ಭಾರತಿಯ ಸಂಸ್ಕೃತಿ ಕಲಿಸಬೇಕು. ಸನಾತನ ಸಂಸ್ಕೃತಿ ಉಳಿಸಲು ರಾಜ್ಯ ಸರ್ಕಾರವು ಪ್ರತಿ ಜಿಲ್ಲೆಗಳ ಗ್ರಾಮೀಣ ಭಾಗದಲ್ಲಿ ಸುಗ್ಗಿ-ಹುಗ್ಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾನಪದ ಕಲೆಯನ್ನು ಉಳಿಸುತ್ತಿದೆ. ಮಕ್ಕಳು ಸುಸಂಸ್ಕೃತರಾಗಲು ತಾಯಂದಿರ ಪಾತ್ರ ಬಹು ಮುಖ್ಯ. ಆದ್ದರಿಂದ ಇಂತಹ ಕಾರ್ಯಕ್ರಮಗಳಲ್ಲಿ ಪಾಲಕರು ಪಾಲ್ಗೊಂಡು ಸನಾತನ ಸಂಸ್ಕೃತಿಯನ್ನು ಉಳಿಸಬೇಕು ಎಂದು ಕರೆ ನೀಡಿದರು.
ಜಿ.ಪಂ.ಸದಸ್ಯ ಎಲ್.ಟಿ.ಪಾಟೀಲ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಸಹದೇವ ನಡಿಗೇರ ಅವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ವಿವಿಧ ಕಲಾ ತಂಡದವರು ಗ್ರಾಮದಲ್ಲಿ ಮೆರವಣಿಗೆ ನಡೆಸಿ ನೋಡುಗರ ಗಮನ ಸೆಳೆದರು.
ರಾಜ್ಯದ ಹಲವಾರು ಕಲಾ ತಂಡದವರು ಜೋಗುತಿ ನೃತ್ಯ, ವೀರಗಾಸೆ, ಸೋಬಾನ ಪದ, ಸುಗ್ಗಿ ಕುಣಿತ, ಗೊಂಬೆ ಕುಣಿತ ಇನ್ನೂ ಹಲವಾರು ಜಾನಪದ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಜನಮನ ರಂಜಿಸಿದರು.
ನಾಗಭೂಷಣ ಹಾವಣಗಿ, ಗುಡ್ಡಪ್ಪ ಕಾತೂರ, ಉಮೇಶ ಬಿಜಾಪುರ, ಜ್ಞಾನದೇವ ಗುಡಿಯಾಳ, ಮಹೇಶ ಹೊಸಕೊಪ್ಪ ಇತರರಿದ್ದರು. ನಿಖಿತಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಮಧು ಹಾಗೂ ಸಂಗಡಿಗರು ನಾಡಗೀತೆ ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಎನ್.ಜಿ.ನಾಯ್ಕ ಸ್ವಾಗತಿಸಿದರು.