ಕಾರವಾರ : “ರಾಜ್ಯದ ಎಲ್ಲ ಕೆಡಿಸಿಸಿ ಬ್ಯಾಂಕ್ಗಳಿಗೆ ಸಹಕಾರಿ ಸಚಿವನಾದ ಮೇಲೆ ಭೇಟಿ ನೀಡಿದ್ದೇನೆ, ಎಲ್ಲ ಬ್ಯಾಂಕ್ಗಳಲ್ಲಿ ಶಿರಸಿಯ ಕೆಡಿಸಿಸಿ ಬ್ಯಾಂಕ್ಗೆ ಪ್ರಥಮ ಸ್ಥಾನ” ಎಂದು ಸಹಕಾರಿ ಸಚಿವ ಎಸ್ಟಿ ಸೋಮಶೇಖರ್ ಹೇಳಿದರು.
ಸೋಮವಾರ ಶಿರಸಿಯ ಕೆನರಾ ಡಿಸ್ಟ್ರಿಕ್ಟ ಸೆಂಟ್ರಲ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ನ ಶತಮಾನೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೆಡಿಸಿಸಿ ಹಾಗೂ ಅಪೇಕ್ಸ್ ಬ್ಯಾಂಕ್ಗಳು ರೈತರ ಆತ್ಮಸ್ಥೈರ್ಯವಾಗಿವೆ, ಇಂತಹ ಬ್ಯಾಂಕ್ಗಳು ಸದೃಢ ಸ್ಥಿತಿಯಲ್ಲಿದ್ದರೆ ರೈತರು ಸಂತೋಷದಿಂದಿರಲು ಸಾಧ್ಯ, ಈ ನಿಟ್ಟಿನಲ್ಲಿ ಒಂದು ವರ್ಷವೂ ನಷ್ಟವನ್ನು ಅನುಭವಿಸದೆ ರೈತರ ಸಹಕಾರ ಸೇವೆಯಲ್ಲಿ ತೊಡಗಿಸಿಕೊಂಡು ಶತಮಾನೋತ್ಸವ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿರುವ ಶಿರಸಿಯ ಕೆಡಿಸಿಸಿ ಬ್ಯಾಂಕ್ನ ಕಾರ್ಯ ಸಂತಸ ತಂದಿದೆ ಎಂದರು.
ರಾಜ್ಯದಲ್ಲಿ ಈಗಾಗಲೇ 10 ಲಕ್ಷ ರೈತರಿಗೆ 7794 ಕೋಟಿ ಅಲ್ಪಾವಧಿ ಹಾಗೂ ದೀರ್ಘಾವಧಿ ಬೆಳೆಸಾಲ ನೀಡಲು ಚಾಲನೆ ನೀಡಲಾಗಿದೆ. ಶಿರಸಿಯ ಕೆಡಿಸಿಸಿ ಬ್ಯಾಂಕ್ಗೆ ಆಡಳಿತ ಸಹಕಾರದೊಂದಿಗೆ ರೈತರ ಸಹಕಾರ ಇರುವುದರಿಂದ ಈ ಶತಮಾನೋತ್ಸವ ಸಾಧ್ಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನ ಉದ್ದೇಶಿಸಿ ಕಾರ್ಮಿಕ ಸಚಿವ, ಉತ್ತರಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಹಾಗೂ ಶಿರಸಿ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಶಿವರಾಮ್ ಹೆಬ್ಬಾರ್ ಪ್ರಾಸ್ತವಿಕ ಮಾತನಾಡಿ, ಜಿಲ್ಲೆಯು ಸಹಕಾರಿ ಕ್ಷೇತ್ರಕ್ಕೆ ಸಂಕೇತವಾಗಿದೆ, ಕೇವಲ 2505 ರೂಪಾಯಿ ಶೇರು ಬಂಡವಾಳದಿಂದ ಪ್ರಾರಂಭವಾದ ಬ್ಯಾಂಕ್ ಇಂದು 80 ಕೋಟಿ ಶೇರು ಬಂಡವಾಳವನ್ನು ಹೊಂದಿದೆ. ಜಿಲ್ಲೆಯ 3.5 ಲಕ್ಷ ಗ್ರಾಹಕರು ಶೇ.98 ರೈತ ಕುಟುಂಬಗಳು ಈ ಬ್ಯಾಂಕಿನ ವ್ಯಾಪ್ತಿಯಲ್ಲಿ ಒಳಪಡುತ್ತಾರೆ ಎಂದರು.
ಜಿಲ್ಲೆಯಲ್ಲಿ ಒಟ್ಟೂ 53 ಶಾಖೆಗಳಿದ್ದು 20 ಶಾಖೆಗೆ ಸ್ವಂತ ಕಟ್ಟಡಗಳಿವೆ, ಅಲ್ಲದೆ ಶತಮಾನೋತ್ಸವದ ಸವಿನೆನಪಿಗಾಗಿ ಮುಂಡಗೋಡಿನ ಪಾಳ ಪ್ರದೇಶದಲ್ಲಿ ಮತ್ತೊಂದು ಶತಮಾನೋತ್ಸವದ ಅಂಗವಾಗಿ ಶಾಖೆಯನ್ನು ತೆರೆಯಲಿದ್ದೆವೆ. ಶಿರಸಿಯ ಕೆಡಿಸಿಸಿ ಸಂಪೂರ್ಣ ಮಹಿಳಾ ಬ್ಯಾಂಕ್ ಆಗಿರುವುದು ವಿಶೇಷ. ರೈತರಿಗೆ 800 ಕೋಟಿಯಷ್ಟು ಶೇ.0 ಬಡ್ಡಿಯಲ್ಲಿ ಬೆಳೆ ಸಾಲ ಒದಗಿಸಿದ್ದೇವೆ, 100 ಕೋಟಿಯಷ್ಟು ಮಧ್ಯಮ ಅವಧಿ ಸಾಲ, 1000 ಕ್ಕೂ ಹೆಚ್ಚು ಕೋಟಿ ರೂ, ಕೃಷಿಯೇತರ ಸಾಲ ಒದಗಿಸಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮೈಕ್ರೋ ಎಟಿಎಮ್ ಸೇವೆಯನ್ನು ಉದ್ಘಾಟಿಸಿದ ಕೃಷಿ ಸಚಿವ ಬಿ ಸಿ ಪಾಟೀಲ್ ಮಾತನಾಡಿ ಕೃಷಿಯು ಸಹಕಾರಿ ಬ್ಯಾಂಕ್ಗಳ ಮೂಲ, ಶಿರಸಿಯಲ್ಲಿ ಉತ್ತಮ ಮಾರುಕಟ್ಟೆ ಹಾಗೂ ಕೃಷಿ ಉತ್ಪನ್ನಗಳ ಸಂಸ್ಕರಣೆ ಘಟಕಗಳು ಇರುವುದು ಸಹಕಾರಿ ಬ್ಯಾಂಕ್ನ ಬೆಳವಣಿಗೆಗೆ ಕಾರಣ ಎಂದರು.
ಕಾರ್ಯಕ್ರಮದಲ್ಲಿ ಹಳಿಯಾಳ ಜೋಯಿಡಾ ಕ್ಷೇತ್ರದ ಶಾಸಕ ಆರ್ ವಿ ದೇಶಪಾಂಡೆ, ವಿಧಾನಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಕುಮಟಾ ಹೊನ್ನಾವರ ಕ್ಷೇತ್ರದ ಶಾಸಕ ದಿನಕರ್ ಶೆಟ್ಟಿ, ಭಟ್ಕಳ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ್, ಅಪೆಕ್ಸ್ ಬ್ಯಾಂಕ್ನ ಅಧ್ಯಕ್ಷ ಬೆಳ್ಳಿಪ್ರಕಾಶ್, ಸ್ಥಳೀಯ ಮುಖಂಡರು ಹಾಗೂ ಬ್ಯಾಂಕ್ನ ಮಾಜಿ ಮತ್ತು ಹಾಲಿ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.