ಭಟ್ಕಳ: ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ಬಿಎ ಪತ್ರಿಕೋದ್ಯಮ ವಿಭಾಗದಿಂದ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಭಟ್ಕಳ ಘಟಕಕ್ಕೆ ಅಯ್ಕೆಯಾಗಿರುವ ಪದಾಧಿಕಾರಿಗಳಿಗೆ ಗೌರವ ಸಲ್ಲಿಸುವ ವಿಶೇಷ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಂಶುಪಾಲ ಶ್ರೀನಾಥ ಪೈ ಮಾತನಾಡಿ "ಪತ್ರಿಕೆ ಸೂಕ್ತ ಸಮಯದಲ್ಲಿ ಓದುಗರ ಮನೆ - ಮನೆಗೆ ತಲುಪಿಸುವಲ್ಲಿ ತಮ್ಮ ಕಾರ್ಯ ಶ್ಲಾಘನೀಯ, ತಮ್ಮ ನಿಷ್ಠೆ, ಪ್ರಾಮಾಣಿಕತೆ, ಸಮಯಪ್ರಜ್ಞೆ, ನಿರಂತರ ಪ್ರಯತ್ನ, ಪರಿಶ್ರಮ ಹಾಗೂ ಸರಳತೆ ಎಲ್ಲರಿಗೂ ಮಾರ್ಗದರ್ಶಿಯಾಗಿದೆ" ಎಂದು ಹೇಳಿದರು. ಬಿಎ, ಬಿಬಿಎ ವಿಭಾಗದ ಉಪಪ್ರಾಂಶುಪಾಲ ವಿಶ್ವನಾಥ ಭಟ್ಟ ಎಲ್ಲರನ್ನು ಸ್ವಾಗತಿಸಿದರು.
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಭಟ್ಕಳ ಘಟಕದ ಅಧ್ಯಕ್ಷ ರಾಮಕೃಷ್ಣ ಭಟ್ಟ, ಕಾರ್ಯದರ್ಶಿ ಮಂಜುನಾಥ ದೇವಾಡಿಗ, ಸದಸ್ಯರಾದ ಫ್ರಾನ್ಸಿಸ್ ಡಿಸೋಜಾ ಹಾಗೂ ಮಂಜುನಾಥ ಮೊಗೇರ ಇವರನ್ನು ಬಿಎ ಪತ್ರಿಕೋದ್ಯಮ ವಿದ್ಯಾರ್ಥಿಗಳು ಸ್ಮರಣಿಕೆ ಹಾಗೂ ಅಭಿನಂದನಾ ಪತ್ರ ನೀಡಿ ಗೌರವಿಸುವ ಮೂಲಕ ಅಭಿನಂದಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕ ಕೃಷ್ಣ ಎಂ, ದೈಹಿಕ ನಿರ್ದೇಶಕ ವಿನಾಯಕ ನಾಯ್ಕ ಹಾಗೂ ಬಿಎ ಪತ್ರಿಕೋದ್ಯಮ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.