ದುಡಿಮೆಗಾರರನ್ನು ಹಿಂಡಿ ,ಕಾರ್ಪೊರೇಟ್ ತಿಜೋರಿ ತುಂಬಿಸುವ ಸತತ 10 ನೇ ರೈತ-ಕಾರ್ಮಿಕ ವಿರೋಧಿ ಬಜೆಟ್ ಖಂಡಿಸಿ ಪ್ರತಿಭಟನೆಗೆ ರೈತ ಸಂಘ ಕರೆ
ಕಾರವಾರ: ಕೃಷಿ ರಂಗ ಸೇರಿದಂತೆ ದೇಶದ ಎಲ್ಲಾ ಕ್ಷೇತ್ರಗಳನ್ನು ಕಾರ್ಪೊರೇಟ್ ವಲಯಕ್ಕೆ ಹಸ್ತಾಂತರಿಸುವ ,ವಿವೇಚನಾ ರಹಿತ ಖಾಸಗೀಕರಣಕ್ಕೆ ಒಳಪಡಿಸುವ, ನಿರುದ್ಯೋಗ, ಬಡತನ ತೀವ್ರಗೊಳಿಸುವ, ರೈತರನ್ನು ದಿವಾಳಿ ಮಾಡುವ ಒಟ್ಟಾರೆಯಾಗಿ ದುಡಿಮೆಗಾರರನ್ನು ಹಿಂಡಿ ಕಾರ್ಪೊರೇಟ್ ತಿಜೋರಿ ತುಂಬಿಸುವ ನರೇಂದ್ರ ಮೋದಿ ನೇತೃತ್ವದ 10 ನೇ ಕೇಂದ್ರ ಬಜೆಟ್ ಖಂಡಿಸಿ ಫೆಬ್ರವರಿ 16 ರಂದು ಪ್ರತಿಭಟಿಸಲು ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯದ ರೈತ, ಕಾರ್ಮಿಕ, ದಲಿತ,ಮಹಿಳಾ, ವಿದ್ಯಾರ್ಥಿ ಯುವಜನ ಸಮೂಹಗಳು ಜಂಟಿಯಾಗಿ ಹೋರಾಟ ನಡೆಸಲು ಕರೆ ನೀಡಿದೆ.
ಸತತ ಹತ್ತು ವರ್ಷಗಳ ಕಾರ್ಪೊರೇಟ್ ಪರವಾದ ನೀತಿಗಳಿಂದ ಹಾಗೂ ಕೋವಿಡ್ ಜಾಗತಿಕ ಪಿಡುಗು ,ಆರ್ಥಿಕ ಬಿಕ್ಕಟ್ಟುಗಳಿಂದ ನೊಂದು ಬಸವಳಿದಿರುವ ಜನರಿಗೆ ಯಾವುದೇ ಪರಿಹಾರ ಒದಗಿಸಲು ಈ ಬಜೆಟ್ ವಿಫಲವಾಗಿದೆ. ಈಗಾಗಲೇ ಹಿಂದೆಂದೂ ಕಾಣದ ನಿರುದ್ಯೋಗ, ಬೆಲೆ ಏರಿಕೆ -ಹಣದುಬ್ಬರ ದಿಂದ ಜೀವನದ ಕನಿಷ್ಠ ಅಗತ್ಯಗಳನ್ನು ಪೂರೈಸಲು ಹೆಣಗಾಡುತ್ತಿರುವ ಜನರಲ್ಲಿ ಆತ್ಮ ವಿಶ್ವಾಸ ತುಂಬುವ ಬದಲು ವಾಸ್ತವಿಕ ಜನರ ಬದುಕನ್ನು ಕ್ರೂರ ತಮಾಷೆಗೆ ಒಳಪಡಿಸಿದೆ. ಇಂತಹ ಜನ ವಿರೋಧಿ, ರೈತ ,ಕಾರ್ಮಿಕ ವಿರೋಧಿ ಬಜೆಟ್ ಅನ್ನು ವಿರೋಧಿಸಿ ಪೆಬ್ರವರಿ 16 ರಂದು ರಾಜ್ಯದಾದ್ಯಂತ ಬೃಹತ್ ಪ್ರತಿಭಟನೆಗೆ ಕರೆನಿಡಲಾಗಿದ್ದು ಜಿಲ್ಲೆಯ ಲ್ಲು ಯಶಸ್ವಿಯಾಗಿ ಹೋರಾಟ ಸಂಘಟಿಸಲು ತೀರ್ಮಾನಿಸಲಾಗಿದೆ.
ನಕಲಿ ಕಥನ , ಸುಳ್ಳುಗಳ ಹಾಗೂ ದಾರಿ ತಪ್ಪಿಸುವ ಅಂಕಿ ಅಂಶಗಳ ಬಜೆಟ್ ಭಾಷಣದಲ್ಲಿ ಸತತವಾಗಿ ಹದಗೆಡುತ್ತಿರುವ ಆರ್ಥಿಕ ಪರಿಸ್ಥಿತಿಯ ವಾಸ್ತವವನ್ನು ಮರೆ ಮಾಚಲಾಗಿದೆ. ಕಳೆದ ಐದು ವರ್ಷಗಳಲ್ಲೇ 2023-24 ರ ವರ್ಷದಲ್ಲಿ ಕೃಷಿ ರಂಗಕ್ಕೆ ಅತಿ ಕಡಿಮೆ ವೆಚ್ಚ ಮಾಡಲಾಗಿದೆ.ಈ ಹಿಂದಿನ ವರ್ಷಕ್ಕೆ ಮಾಡಲಾದ ವೆಚ್ಚದಲ್ಲಿ ಶೇ 22.3 ರಷ್ಟು ಇಳಿಕೆ ಯಾಗಿದ್ದನ್ನು 2024-25 ಕ್ಕೂ ಮತ್ತಷ್ಟು ವೆಚ್ಚ ಇಳಿಕೆಯ ಕ್ರಮವನ್ನೇ ಮುಂದುವರೆಸಲಾಗಿದೆ. ಕೃಷಿ ಲಾಗುವಾಡುಗಳ ಬೆಲೆ ಏರಿಕೆಗೆ ಅವಕಾಶ ನೀಡುವಂತಹ ಪ್ರಸ್ತಾಪಗಳ ಮೂಲಕ ರೈತಾಪಿ ಕೃಷಿಯನ್ನು ಮತ್ತಷ್ಟು ದುಬಾರಿಗೊಳಿಸಿ ರೈತರನ್ನು ದಿವಾಳಿ ಮಾಡುವ ಕ್ರಮಗಳನ್ನೇ ಈ ಬಜೆಟ್ ನಲ್ಲೂ ಮುಂದುವರೆಸಲಾಗಿದೆ. ಚುನಾವಣಾ ವರ್ಷದಲ್ಲೂ ಕೂಡ ಕೃಷಿಗಾಗಲಿ ,ರೈತರಿಗಾಗಲಿ ಯಾವುದೇ ನೆರವು ನೀಡಿಲ್ಲ ,ಅದೇ ರೀತಿ ಬೆಲೆ ಏರಿಕೆಯಿಂದ ನೊಂದ ಜನಸಾಮಾನ್ಯರಿಗೂ ಯಾವುದೇ ಪರಿಹಾರ ಒದಗಿಸಿಲ್ಲ ಬರ ಪರಿಹಾರಕ್ಕೂ ಒತ್ತು ನೀಡಿಲ್ಲ. ಎಂದು ಕರ್ನಾಟಕ ಪ್ರಾಂತ ರೈತ ಸಂಘ ಆಕ್ರೋಶ ವ್ಯಕ್ತಪಡಿಸುತ್ತದೆ.
ಕಳೆದ ಹತ್ತು ವರ್ಷಗಳಲ್ಲಿ ಸುಮಾರು 4 ಲಕ್ಷ ಕೋಟಿ ರೂ ಗೂ ಹೆಚ್ಚುಹಣಕ್ಕೆ ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡಿ ದೇಶ ಹಾಗೂ ವಿದೇಶ ಕಾರ್ಪೊರೇಟ್ ಕಂಪನಿಗಳಿಗೆ ಭಾರತವನ್ನೇ ಇಡಿಯಾಗಿ ಮಾರಾಟ ಮಾಡುವ ಈ ಹಿಂದಿನ ವಿವೇಚನಾ ಹೀನ ಖಾಸಗೀಕರಣ ಪ್ರಕ್ರಿಯೆಯನ್ನು ಈ ಬಜೆಟ್ ನಲ್ಲೂ ಕೂಡ ಮುಂದುವರೆಸಿದ್ದು ಸುಮಾರು ಐವತ್ತು ಸಾವಿರ ಕೋಟಿ ರೂ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ವಲಯದ ಖಾಸಗೀಕರಣಕ್ಕೆ ಉತ್ತೇಜನ ನೀಡಲು ,ಖಾಸಗಿ ಕಂಪನಿಗಳಿಗೆ ಸಾಲ ಒದಗಿಸುವ ಒಂದು ಲಕ್ಷ ಕೋಟಿ ಮೀಸಲು ನಿಧಿಯ ಪ್ರಸ್ತಾಪವು ಅತ್ಯಂತ ಆಯಕಟ್ಟಿನ ಮತ್ತು ನಮ್ಮ ದೇಶದ ಸ್ವಾವಲಂಬನೆ ಹಾಗೂ ರಕ್ಷಣಾ ವಿಷಯದಲ್ಲಿ ಮಾಡಿಕೊಂಡಿರುವ ಗಂಭೀರ ರಾಜಿಯಾಗಿದೆ. ಭಾರತೀಯರೆಲ್ಲರಿಗೂ ರಾಮ ಭಜನೆಯ ಹೆಸರಿನಲ್ಲಿ ಕಣ್ಣು ಮುಚ್ವಿಸಿ ,ದೇಶದ ಆರ್ಥಿಕತೆ ಹಾಗೂ ರಕ್ಷಣಾ ವ್ಯವಸ್ಥೆಯನ್ನು ಸಂಪೂರ್ಣ ವಿದೇಶಿ ಕಾರ್ಪೊರೇಟ್ ಗಳಿಗೆ ತೆರೆಯಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ತೀವ್ರವಾಗಿ ಖಂಡಿಸುತ್ತದೆ.
ಕಾರ್ಪೊರೇಟ್ ಹಿಂದುತ್ವ ಆಳ್ವಿಕೆಯ ಈ ಜನ ವಿರೋಧಿ ಬಜೆಟ್ ಮುಂದೆ ಬರಲಿರುವ ಪೂರ್ಣ ಪ್ರಮಾಣದ ಬಜೆಟ್ ನ ಸ್ವರೂಪದ ಪರಿಚಯ ಮಾಡಿಕೊಟ್ಟಿದ್ದು ,ಸ್ವತಂತ್ರ ಭಾರತದ ಅತಿ ಹೆಚ್ಚು ಕಾರ್ಪೊರೇಟ್ ಪರ ಸರ್ಕಾರವನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ಮತ್ತು ಕಾರ್ಯದರ್ಶಿ ಶ್ಯಾಮನಾಥ ನಾಯ್ಕ ಎಚ್ಚರಿಸಿದ್ದಾರೆ.