ಸುಪ್ರೀಂ ಕೋರ್ಟ್ ಸಮಿತಿ ನೇಮಿಸಿದ ಸಮಿತಿಯ ಮುಂದೆ ಹೋಗುವುದಿಲ್ಲ : ರೈತ ಮುಖಂಡ ದರ್ಶನ್ ಪಾಲ್
ನವದೆಹಲಿ : 9ನೇ ಸುತ್ತಿನ ಮಾತುಕತೆಯ ಮೂಲಕ ಕೇಂದ್ರ ಸರ್ಕಾರ ಮತ್ತು ರೈತ ಸಂಘಟನೆಗಳ ಜೊತೆಗೆ ಮಾತುಕತೆ ಮುಕ್ತಾಯಗೊಂಡಿದೆ. ಇನ್ನೇನಿದ್ದರೂ ಸುಪ್ರೀಂ ಕೋರ್ಟ್ ನೇಮಿಸಿರುವ ತಜ್ಞರ ಸಮಿತಿಯೊಂದಿಗೆ ರೈತರು ಚರ್ಚೆ ನಡೆಸಬೇಕು. ಆದರೆ ನಾವು ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿ ಎದುರು ಯಾವುದೇ ರೀತಿಯ ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ರೈತ ಮುಖಂಡ ದರ್ಶನ್ ಪಾಲ್ ಹೇಳಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ ಸಭೆಯಲ್ಲಿ ಸರ್ವಾನುಮತದಿಂದ ನಿರ್ಧರಿಸಿದ್ದೇವೆ. ಕೋರ್ಟ್ ನೇಮಿಸಿರುವ ಸಮಿತಿಯ ಸದಸ್ಯರಲ್ಲಿ ಇಬ್ಬರು ಕೃಷಿ ಕಾಯ್ದೆ ಜಾರಿಯಾಗೆಲೆಂದು ಹೇಳುತ್ತಾ ಬಂದವರು. ಹೊಸ ಕೃಷಿ ಕಾಯ್ದೆಗಳ ಪರವಾಗಿ ಹಲವು ಲೇಖನಗಳನ್ನು ಬರೆದಿದ್ದಾರೆ. ಇಂತಹ ಸದಸ್ಯರಿರುವ ಸಮಿತಿಯೊಂದಿಗೆ ನಾವು ಹೇಗೆ ಮಾತನಾಡುವುದು ಎಂದು ದರ್ಶನ್ ಪಾಲ್ ಪ್ರಶ್ನಿಸಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪುಗಳಲ್ಲಿ ಎರಡನ್ನು ನಾವು ಸ್ವಾಗತಿಸಿದ್ದೆವು. ನಾವು ಪ್ರತಿಭಟನೆ ನಿಲ್ಲಿಸುವುದಿಲ್ಲ. ಪ್ರತಿಭಟನೆ ಮಾಡುವುದು ರೈತರ ಹಕ್ಕು. ಪ್ರತಿಭಟನೆ ನಿಲ್ಲಿಸಲು ಹೇಳುವುದಿಲ್ಲ ಎಂದು ಕೋರ್ಟ್ ಹೇಳಿತ್ತು. ಜೊತೆಗೆ ಕೃಷಿ ಕಾಯ್ದೆಗಳ ಜಾರಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲು ಕೇಂದ್ರಕ್ಕೆ ಸೂಚಿಸಿತ್ತು. ಇವೆರಡನ್ನು ಸ್ವಾಗತಿಸಿದೆವು. ಆದರೆ ಸಮಿತಿಯ ರಚನೆಗೆ ನಮ್ಮ ವಿರೋಧವಿದೆ. ಮಿತಿ ರಚನೆ ವಿರೋಧವಿದೆ. ಸಮಿತಿಯನ್ನು ನಾವು ತಿರಸ್ಕರಿಸುತ್ತೇವೆ. ನಾವು ಯಾವುದೇ ಚರ್ಚೆಗೆ ಹೋಗುವುದಿಲ್ಲ ಎಂದು ದರ್ಶನ್ಪಾಲ್ ತಿಳಿಸಿದ್ದಾರೆ.