ಮುಂಡಗೋಡ: ನಿವೃತ್ತಿ ಶಾಪವಲ್ಲ ವರ. ನಿವೃತ್ತಿ ನಂತರ ವ್ಯಕ್ತಿಯ ವ್ಯಕ್ತಿತ್ವ ಬದಲಾವಣೆಯಾಗುವುದು. ನಿವೃತ್ತ ನೌಕರರ ಸಂಘ ಸಂಪೂರ್ಣವಾಗಿ ಜಾತ್ಯಾತೀತವಾಗಿದೆ ಎಂದು ಸಿದ್ದಾಪುರ ತಾಲೂಕಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಗೌಡರ ಹೇಳಿದರು.
ಪಟ್ಟಣದ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಯೋಗ ಹಾಲ್ನಲ್ಲಿ ರಾಜ್ಯ ನಿವೃತ್ತ ನೌಕರರ ಸಂಘ ತಾಲೂಕು ಘಟಕದ ವತಿಯಿಂದ ಜರುಗಿದ ಹಿರಿಯ ನಾಗರಿಕರ ಸನ್ಮಾನ ಸಮಾರಂಭ ಹಾಗೂ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಸಂಘ ಕರ್ನಾಟಕದಲ್ಲಿಯೇ ಅತ್ಯುತ್ತಮ ಸಂಘವಾಗಿದೆ. ಸರ್ವ ಸದಸ್ಯರು ಸಮಾಜಮುಖಿಗಳಾಗಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಪಟ್ಟಣದ ಸರಕಾರಿ ಆಯುರ್ವೇದ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಸಂಜೀವ ಗಲಗಲಿ ಮಾತನಾಡಿ ನಾವು ಎಷ್ಟೇ ಒತ್ತಡದ ಕೆಲಸದಲ್ಲಿ ನಿರತರಾಗಿದ್ದರೂ ಕೂಡ ವಯೋವೃದ್ಧರ ಕ್ಷೇಮಾಭಿವೃದ್ಧಿಯನ್ನು ಕಡೆಗಾಣಿಸಬಾರದು. ನಾವು ಸೇವಿಸುವ ಆಹಾರದ ಬಗ್ಗೆ ಯಾರಿಂದಲೂ ಕೇಳುವ ಅಗತ್ಯವಿಲ್ಲ. ನಮ್ಮ ಶರೀರಕ್ಕನುಗುಣವಾಗಿ ಸೇವಿಸಿದರೆ ಸಾಕು. ಕೇವಲ ನೀರಡಿಕೆಯಾದಾಗ ನೀರು ಕುಡಿಯಬೇಕು. ಹಸಿವೆಯಾದಾಗ ಮಾತ್ರ ಊಟ ಮತ್ತು ನಿದ್ರೆ ಬಂದಾಗ ಚೆನ್ನಾಗಿ ನಿದ್ರೆ ಮಾಡಬೇಕು ಎಂದರು.
ಇನ್ನೊಬ್ಬ ಅತಿಥಿ ಡಾ.ಪಿ.ಪಿ. ಛಬ್ಬಿ ಮಾತನಾಡಿ ಬೇರೆ ಸಂಘಟನೆಗಳು ನಮ್ಮ ನಿವೃತ್ತ ನೌಕರರ ಸಂಘವನ್ನು ನೋಡಿ ಕಲಿಯಬೇಕಾದದ್ದು ಬಹಳಷ್ಟು ಇದೆ. ಮನುಷ್ಯನಿಗೆ ಬಾಯಿ ಚಪಲ ಇರಬಾರದು ಇತಿ ಮಿತಿಯಿಂದ ಆಹಾರ ಸೇವನೆ ಮಾಡಬೇಕು. ನಾವು ನಮ್ಮ ಮುಂಬರುವ ಪೀಳಿಗೆಯ ಮಕ್ಕಳಿಗೆ ಮನೆಯಲ್ಲಿ ಸಂಸ್ಕøತಿ ಕಲಿಸಿದರೆ ವೃದ್ಧಾಶ್ರಮಗಳ ಅವಶ್ಯಕತೆ ಇರುವುದಿಲ್ಲ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ನಿವೃತ್ತ ನೌಕರ ಎಸ್.ಬಿ. ಶೇಟ್, ಈ ಸನ್ಮಾನದಿಂದ ನಮಗೆ ಮತ್ತಷ್ಟು ಉತ್ತೇಜನ ದೊರಕಿದಂತಾಗಿದೆ ಇದೊಂದು ಉತ್ತಮ ಪರಿಪಾಠ. ಇಲ್ಲಿ ಎಲ್ಲ ಇಲಾಖೆಗಳ ನೌಕರರ ಸಂಗಮವಾಗಿದೆ ಎಂದರು. ಸನ್ಮಾನಿತರಾದ ಪೊನ್ನಮ್ಮ ವರ್ಗೀಸ್ ಮಾತನಾಡಿ ಅನ್ಯೋನ್ಯತೆ ಹಾಗೂ ಸಹೋದರತ್ವದ ಭಾವನೆ ನನ್ನಲ್ಲಿ ಮೂಡಿದೆ. ನಿವೃತ್ತರಿಗೆ ಬೆಲೆ ನೀಡಿದಂತಾಗಿದೆ. ನಿವೃತ್ತರು ಆರೋಗ್ಯದ ಕಡೆ ಗಮನ ಹರಿಸಬೇಕು ಕಾಲಕಾಲಕ್ಕೆ ಔಷಧೋಪಚಾರ ಪಡೆಯಬೇಕು ಎಂದರು. ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಬಿ. ಹಿರೇಮಠ ಮಾತನಾಡಿದರು.
ಇದೇ ಸಂದರ್ಭದಲ್ಲಿ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು.
ಎಂ.ಎನ್. ಅರ್ಕಸಾಲಿ ಪ್ರಾರ್ಥಿಸಿದರು. ಬಿ.ಎಚ್. ತಳವಾರ ಸ್ವಾಗತಿಸಿದರು. ವಸಂತ ಕೊಣಸಾಲಿ ವರದಿ ವಾಚಿಸಿದರು. ಎಸ್.ಕೆ. ಬೋರಕರ ನಿರೂಪಿಸಿದರು. ಎಚ್. ಎನ್. ತಪೇಲಿ ವಂದಿಸಿದರು. ತಾಲೂಕಿನ ಎಲ್ಲ ನಿವೃತ್ತ ನೌಕರರು ಇದ್ದರು.