ಅನಾಥ ವೃದ್ಧೆಯನ್ನು ಆಶ್ರಮಕ್ಕೆ ಕಳುಹಿಸಿಕೊಟ್ಟ ವೈದ್ಯರು

Source: S.O. News Service | Published on 24th January 2020, 8:03 PM | Coastal News |

ಭಟ್ಕಳ: ಕಳೆದ ಒಂದು ವಾರದಿಂದ ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಅನಾಥ ವೃದ್ಧೆಯನ್ನು ಭಟ್ಕಳ ಸರಕಾರಿ ಆಸ್ಪತ್ರೆಯ ವೈದ್ಯರು ಗುರುವಾರ ಹೊನ್ನಾವರ ಇಡಗುಂಜಿಯ ಶ್ರೀಧರ ಸೇವಾ ಆಶ್ರಮಕ್ಕೆ ಕಳುಹಿಸಿಕೊಟ್ಟರು.
ಸುಕ್ರಿ ಹೆಸರಿನ ಈ ವೃದ್ಧೆ ಅಜಮಾಸು 75 ವರ್ಷ ವಯೋಮಾನದವರಾಗಿದ್ದು, ಮುರುಡೇಶ್ವರದ ರಸ್ತೆಯಲ್ಲಿ ಅನಾಥವಾಗಿ ಬಿದ್ದುಕೊಂಡಿದ್ದ ಇವರನ್ನು ಕಳೆದ ಜ.18ರಂದು 108 ವಾಹನದ ಮೂಲಕ ಭಟ್ಕಳ ಸರಕಾರಿ ಆಸ್ಪತ್ರೆಗೆ ಕರೆ ತಂದು ದಾಖಲಿಸಲಾಗಿತ್ತು. ಸತತ ಚಿಕಿತ್ಸೆಯ ನಂತರ ಆಕೆ ಚೇತರಿಸಿಕೊಂಡಿದ್ದು, ಆಕೆಯ ಊರು, ವಾರಸುದಾರರು, ಸಂಬಂಧಿಕರು ಯಾರು ಎನ್ನುವುದು ಗೊತ್ತಾಗದ ಕಾರಣ ಆಕೆಯ ಆರೈಕೆಗೆ ವ್ಯವಸ್ಥೆಯನ್ನು ಕಲ್ಪಿಸಲು ಪೊಲೀಸರು ಹಾಗೂ ವೈದ್ಯಾಧಿಕಾರಿಗಳು ಪ್ರಯತ್ನ ನಡೆಸಿದ್ದರು. ಭಟ್ಕಳ ಆಸ್ಪತ್ರೆಯಲ್ಲಿ ಅನಾಥ ವೃದ್ಧೆ ಇರುವ ಬಗ್ಗೆ ಮಾಹಿತಿ ಪಡೆದುಕೊಂಡ ಹೊನ್ನಾವರ ಇಡಗುಂಜಿಯ ಸಮರ್ಥ ಶ್ರೀಧರ ಸೇವಾ ಆಶ್ರಮದ ಗೋಪಾಲ ಎಚ್. ನಾಯ್ಕ, ವಾರಸುದಾರರು ಪತ್ತೆಯಾಗುವವರೆಗೂ ವೃದ್ಧೆಯನ್ನು ತಮ್ಮ ಆಶ್ರಮದಲ್ಲಿ ಇಟ್ಟುಕೊಳ್ಳಲು ಒಪ್ಪಿಗೆ ಸೂಚಿಸಿ ಗುರುವಾರ ತಮ್ಮೊಂದಿಗೆ ಕರೆದೊಯ್ದರು. ಈ ಸಂದರ್ಭದಲ್ಲಿ ಮಾತನಾಡಿದ ಭಟ್ಕಳ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್, ರೋಗಿ ಗುಣಮುಖರಾದ ನಂತರವೂ ಆಸ್ಪತ್ರೆಯಲ್ಲಿಯೇ ಇಟ್ಟುಕೊಳ್ಳಲು ಸಾಧ್ಯವಿಲ್ಲದ ಕಾರಣ ವೃದ್ಧೆಗೆ ಆಶ್ರಮದ ವ್ಯವಸ್ಥೆ ಮಾಡಿದ್ದೇವೆ. ವೃದ್ಧೆಯ ಸಂಬಂಧಿಕರು ಯಾರಾದರೂ ಮುಂದೆ ಬಂದಲ್ಲಿ ಆಕೆಯನ್ನು ಕರೆದುಕೊಂಡು ಹೋಗಬಹುದು ಎಂದು ತಿಳಿಸಿದರು. ಎಎಸ್‍ಐ ನವೀನ್, ಮಹಿಳಾ ಸಾಂತ್ವನ ಕೇಂದ್ರದ ಗಂಗಾ ಗೌಡ, ಕುಸುಮಾ ಗೊಂಡ ಮೊದಲಾದವರು ಉಪಸ್ಥಿತರಿದ್ದರು.

 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...