ಭಟ್ಕಳ: ಭಟ್ಕಳ ತಾಲೂಕಿನ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ಅಪೂರ್ಣ ಯುಜಿಡಿ(ಒಳಚರಂಡಿ) ಕಾಮಾಗಾರಿಯು ಭಟ್ಕಳದಲ್ಲಿ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತಿದ್ದು ಶುಕ್ರವಾರ ಬಿದ್ದ ಸಣ್ಣ ಮಳೆಗೆ ರಸ್ತೆ ಮಧ್ಯಭಾಗದಲ್ಲಿ ಶಾಲಾ ವಾಹನ ಹುದುಗಿ ಅವಾಂತರ ಸೃಷ್ಟಿಸಿದೆ.
ಯುಜಿಡಿ ಕಾಮಗಾರಿ ನೆಪದಲ್ಲಿ ಡಾಂಬರ್ ರಸ್ತೆಗಳನ್ನು ಅಗೆದು ಅದರಲ್ಲಿ ಕೇವಲ ಮಣ್ಣು ಮಾತ್ರ ತುಂಬಿದ್ದು ಮಳೆಯಿಂದಾಗಿ ಮಣ್ಣು ಸಡಿಲಗೊಂಡಿದೆ. ಚಿಕ್ಕಪುಟ್ಟ ವಾಹನಗಳು ಮೋಟಾರ್ ಬೈಕ್ ಗಳು ಕೂಡ ಮಣ್ಣು ತುಂಬಿದ ರಸ್ತೆಯಲ್ಲಿ ಓಡಾಟ ಮಾಡದಂತೆ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಜಾಲಿ ಪಟ್ಟಣ ಪಂಚಾಯತ್ ಆಝಾದ್ ನಗರದಲ್ಲಿ ಹಲವು ರಸ್ತೆಗಳನ್ನು ಅಗೆದು ಮಣ್ಣು ಮುಚ್ಚಲಾಗಿದ್ದು ಎರಡು ವರ್ಷ ಕಳೆದರೂ ರಸ್ತೆ ದುರಸ್ತಿಯನ್ನು ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪಟ್ಟಣ ಪಂಚಾಯತ್ ಗೆ ಚುನಾವಣೆ ನಡೆದು ಒಂದು ವರ್ಷ ಗತಿಸಿದರೂ ಇದುವರೆಗೂ ಅಧಿಕಾರ ಸಿಗಲಿಲ್ಲ ಎಂಬ ಕೊರಗು ಜನರಿಂದ ಆಯ್ಕೆಗೊಂಡಿರುವ ಸದಸ್ಯರದ್ದಾಗಿದ್ದು ಪಂಚಾಯತ್ ನಲ್ಲಿ ಈಗ ಜನಪ್ರತಿನಿಧಿಗಳ ಅಧಿಕಾರವಿಲ್ಲ. ಮುಖ್ಯಾಧಿಕಾರಿಗಳೇ ಇದಕ್ಕೆ ನೇರ ಹೊಣೆಯಾಗಿರುತ್ತಾರೆ. ಅಸಪರ್ಮಕ ಮತ್ತು ಅವೈಜ್ಞಾನಿಕ ಯುಜಿಡಿ ಕಾಮಗಾರಿಗೆ ಅವಕಾಶ ನೀಡಕೂಡದೆಂದು ಸಾರ್ವಜನಿಕರು ಪಟ್ಟು ಹಿಡಿದು ಕೆಲವು ಪ್ರದೇಶಗಳಲ್ಲಿನ ಕಾಮಗಾರಿಗಳನ್ನು ಸ್ಥಗಿತಗೊಳಿಸಿದ್ದಾರೆ. ಇನ್ನೂ ಮುಂದೆ ಮಳೆಗಾಲದಲ್ಲಿ ಪರಿಸ್ಥಿತಿ ತೀರ ಹದಗೆಡುವ ಸಂಭವ ಇರುವುದಿಂದ ಅಪೂರ್ಣಗೊಂಡಿರುವ ಕಾಮಗಾರಿಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.