ಭಟ್ಕಳ: ಬೆಂಗ್ರೆ ಬಂಗಾರಮಕ್ಕಿಯಲ್ಲಿರುವ ಉಸಿರ ಕೈಗಾರಿಕಾ ಘಟಕದಲ್ಲಿ ತೆಂಗಿನ ಗರಿಗಳಿಂದ ವಿವಿಧ ರೀತಿಯ ನೇಯ್ಗೆ ಮಾಡುವುದರ ಉಚಿತ ತರೆಬೇತಿ ಕಾರ್ಯಕ್ರಮವನ್ನು ಭಟ್ಕಳ ಕ್ಷೇತ್ರ ಸಮನ್ವಯಾಧಿಕಾರಿ ಎಲ್ಲಮ್ಮ ಮರಿಸ್ವಾಮಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ನಿರುದ್ಯೋಗಿ ಮಹಿಳೆಯರಿಗೆ ನಮ್ಮ ನಿಸರ್ಗದಲ್ಲಿ ದೊರೆಯುವ ಅನುಪಯುಕ್ತ ವಸ್ತುಗಳನ್ನು ಬಳಸಿ ಕಸದಿಂದ ರಸ ಎಂಬಂತೆ ಅನುಪಯುಕ್ತ ವಸ್ತುಗಳು ಸುಂದರ ಕರಕುಶಲ ವಸ್ತುಗಳಾಗಿ ಅರಳಿಸಿ ಉದ್ಯೋಗದ ದಾರಿ ತೋರಿಸುತ್ತಿರುವ ಉಸಿರಾ ಇಂಡಸ್ಟ್ರೀಸ್ ಮಾಲಿಕ ಮ್ಯಾಥ್ಯೂ ಅವರ ಕಾರ್ಯ ಶ್ಲಾಘನೀಯ ಎಂದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಆರ್.ಎನ್.ಎಸ್ ಶೆಟ್ಟಿ ರೂರಲ್ ಪಾಲಿಟೆಕ್ನಿಕ್ ಉಪ ಪ್ರಾಚಾರ್ಯ ಕೆ. ಮರಿಸ್ವಾಮಿ ಮಾತನಾಡಿ ಮ್ಯಾಥ್ಯೂರವರು ಶುದ್ಧ ಕಾಯಕಯೋಗಿಯಾಗಿ ತನು-ಮನ ಶುದ್ಧಿಯಿಂದ ಕಾಯಕ ಮಾಡುತ್ತಿರುವ, ತಮ್ಮಲ್ಲಿರುವ ವ್ಯಾಪಾರ ಗೌಪ್ಯತೆಯನ್ನು ಕೌಶಲ್ಯ ವಿದ್ಯೆಯನ್ನು ಇತರರಿಗೆ ದಾರೆ ಎರೆದುಕೊಡುತ್ತಿದ್ದಾರೆ. ಯಾರೂ ಕೂಡಾ ತಮ್ಮ ವೃತ್ತಿ ಕೌಶಲ್ಯತೆ, ವ್ಯವಹಾರಿಕ ಗೌಪ್ಯತೆ ಬಿಟ್ಟು ಕೊಡುವುದಿಲ್ಲ ಆದರೆ ಮ್ಯಾಥ್ಯೂ ಅವರು ಮುಚ್ಚು ಮರೆಯಿಲ್ಲದೆ ಇತರರಿಗೂ ತಮ್ಮಲ್ಲಿರುವ ಕೌಶಲ್ಯತೆ ಧಾರೆ ಎರೆಯುತ್ತಾರೆ ಎಂದರು.