ಗುಂಪು ಥಳಿತದ ಅಪರಾಧಿಗಳಿಗೆ ಮರಣದಂಡನೆ; ಲೋಕಸಭೆಯಲ್ಲಿ ನೂತನ 3 ಕ್ರಿಮಿನಲ್ ಕಾನೂನುಗಳ ಮಂಡನೆ; ಬ್ರಿಟಿಷರ ಕಾಲದ ಕಾನೂನುಗಳು ರದ್ದು
ಹೊಸದಿಲ್ಲಿ: ಬ್ರಿಟಿಷರ ಕಾಲದ ಕ್ರಿಮಿನಲ್ ಕಾನೂನುಗಳಿಗೆ ಸಂಪೂರ್ಣ ಕಾಯಕಲ್ಪ ಮಾಡುವುದಾಗಿ ಕೇಂದ್ರ ಸರಕಾರ ಶುಕ್ರವಾರ ಘೋಷಿಸಿದೆ ಹಾಗೂ ಗುಂಪಿನಿಂದ ಥಳಿತಕ್ಕೊಳಗಾಗಿ ಸಾಯುವ ಪ್ರಕರಣಗಳ ದೋಷಿಗಳು ಮತ್ತು ಅಪ್ರಾಪ್ತ ವಯಸ್ಸಿನವರ ಅತ್ಯಾಚಾರ ಪ್ರಕರಣದ ದೋಷಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸುವುದಾಗಿ ಹೇಳಿದೆ.
ಅದೇ ವೇಳೆ, ದೇಶದ್ರೋಹ ಕಾನೂನನ್ನು ರದ್ದುಪಡಿಸಲಾಗಿದ್ದು, 'ಏಕತೆಯನ್ನು ಅಪಾಯಕ್ಕೆ ಗುರಿಪಡಿಸುವುದು' ಎಂಬ ಹೊಸ ಅಪರಾಧವೊಂದನ್ನು ಪರಿಚಯಿಸಲಾಗಿದೆ. ಈ ಅಪರಾಧದ ದೋಷಿಗಳಿಗೂ ಮರಣ ದಂಡನೆ ಶಿಕ್ಷೆಯನ್ನು ಶಿಫಾರಸು ಮಾಡಲಾಗಿದೆ.
ಗೃಹ ಸಚಿವ ಅಮಿತ್ ಶಾ ಮೂರು ಮಸೂದೆಗಳನ್ನು ಮಂಡಿಸಿದರು. ಅವುಗಳೆಂದರೆ- ಭಾರತೀಯ ನ್ಯಾಯ ಸಂಹಿತೆ ಮಸೂದೆ, 2023; ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮಸೂದೆ, 2023 ಮತ್ತು ಭಾರತೀಯ ಸಾಕ್ಷ್ಯ ಮಸೂದೆ, 2023. ಈ ಮಸೂದೆಗಳು ಕ್ರಮವಾಗಿ ಭಾರತೀಯ ದಂಡ ಸಂಹಿತೆ, 1860; ಕ್ರಿಮಿನಲ್ ಪ್ರೊಸೀಜರ್ ಕಾಯ್ದೆ, 1898 ಮತ್ತು ಇಂಡಿಯನ್ ಎವಿಡೆನ್ಸ್ ಕಾಯ್ದೆ, 1872- ಇವುಗಳ ಸ್ಥಾನಗಳಲ್ಲಿ ಬರುತ್ತವೆ.
ಎಲ್ಲಾ ಮೂರು ಮಸೂದೆಗಳನ್ನು ಸ್ಥಾಯಿ ಸಮಿತಿಯೊಂದರ ಪರಿಶೀಲನೆಗಾಗಿ ಒಪ್ಪಿಸಲಾಗಿದೆ.
ಶೀಘ್ರವಾಗಿ ನ್ಯಾಯ ಒದಗಿಸಲು ಮತ್ತು ಜನರ ಸಮಕಾಲೀನ ಅಗತ್ಯಗಳು ಮತ್ತು ಆಶೋತ್ತರಗಳಿಗೆ ಧ್ವನಿಯಾಗುವ ನ್ಯಾಯ ವ್ಯವಸ್ಥೆಯೊಂದನ್ನು ಸೃಷ್ಟಿಸುವುದಕ್ಕಾಗಿ ನೂತನ ಕಾನೂನುಗಳನ್ನು ರೂಪಿಸಲಾಗಿದೆ ಎಂದು ಅಮಿತ್ ಶಾ ಹೇಳಿದರು.