ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಹಿನ್ನೆಲೆ ಇಂದು CWC ಸಭೆಯಲ್ಲಿ, ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ರು. ಆದ್ರೆ ನಿರೀಕ್ಷೆಯಂತೆಯೇ ರಾಹುಲ್ ರಾಜೀನಾಮೆಯನ್ನು ಪಕ್ಷ ತಿರಸ್ಕರಿಸಿದೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ರಣದೀಪ್ ಸುರ್ಜೇವಾಲಾ ಮಾಹಿತಿ ನೀಡಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 52 ಸ್ಥಾನಗಳನ್ನು ಗೆದ್ದಿದ್ದು, ಅದ್ರಲ್ಲೂ ರಾಹುಲ್ ಗಾಂಧಿ ತಮ್ಮ ಭದ್ರಕೋಟೆ ಅಮೇಥಿಯಲ್ಲೇ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಸೋತು ಮುಖಭಂಗ ಅನುಭವಿಸಿದ್ದಾರೆ. ಈ ಹಿನ್ನೆಲೆ ತಾವು ಎಡವಿದ್ದು ಎಲ್ಲಿ ಎಂಬ ಬಗ್ಗೆ ಪರಾಮರ್ಶಿಸಲು CWC ಸಭೆ ನಡೆಸಲಾಯ್ತು. ಈ ವೇಳೆ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ರಾಜೀನಾಮೆ ನೀಡ್ತಾರೆಂದು ಮೊದಲೇ ಸುದ್ದಿಯಾಗಿತ್ತು. ಅದರಂತೆ ಅವರು ರಾಜೀನಾಮೆ ನೀಡಿದ್ದು, ತಿರಸ್ಕಾರ ಕೂಡ ಆಗಿದೆ.
ಇನ್ನು ಸಭೆಯಲ್ಲಿ ಯಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದಾರೆ.