ಬಿಜೆಪಿ ನಾಯಕಿಯ ಮಗಳು ಜೀನ್ಸ್ ಧರಿಸಿ, 'ಸಿಲ್ಲಿ ಸೋಲ್ಸ್ ಬೀಫ್ ಕೆಫೆ' ನಡೆಸಬಹುದೇ?; 'ಬೊಟ್ಟು ಯಾಕಿಟ್ಟಿಲ್ಲ' ಎಂದ ಬಿಜೆಪಿ ಸಂಸದ ಮುನಿಸ್ವಾಮಿಗೆ ಕಾಂಗ್ರೆಸ್ ತಿರುಗೇಟು
ಬೆಂಗಳೂರು: 'ಹಣೆಗೆ ಕುಂಕುಮ ಯಾಕಿಟ್ಟಿಲ್ಲ, ಗಂಡ ಬದುಕಿದ್ದಾನೆ ತಾನೇ' ಎಂದು ಬಿಜೆಪಿ ಸಂಸದ ಮುನಿಸ್ವಾಮಿ ಮಹಿಳೆಗೆ ಅವಮಾನಿಸಿದ್ದು ಬಿಜೆಪಿಯ ಮಹಿಳಾ ವಿರೋಧಿ ನೀತಿಗೆ ಸಾಕ್ಷಿ. ಮಹಿಳೆಯರ ಸ್ವಾತಂತ್ರ್ಯ ಕಸಿಯಲು, ಅವರ ಉಡುಗೆ ತೊಡುಗೆ ನಿರ್ಧರಿಸಲು ಬಿಜೆಪಿಗೆ ಯಾವ ಹಕ್ಕಿದೆ? ಮಹಿಳಾ ದಿನದಂದೇ ಮಹಿಳೆಗೆ ಅವಮಾನಿಸಿ ವಿಕೃತಿ ಮೆರೆದಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಗುರುವಾರ ಸರಣಿ ಟ್ವಿಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಸಂಸದರು ಮಹಿಳೆಯರಿಗೆ ಕುಂಕುಮ ಯಾಕಿಟ್ಟಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ಜನರನ್ನು ಪ್ರಶ್ನಿಸುವ ಮೊದಲು ಬಿಜೆಪಿ ಜನರ ಪ್ರಶ್ನೆಗಳಿಗೆ ಉತ್ತರಿಸಲಿ. ನೆರೆ ಪರಿಹಾರಕ್ಕೆ ಕೇಂದ್ರವನ್ನು ಏಕೆ ಒತ್ತಾಯಿಸಿಲ್ಲ? ಜಿಎಸ್ಟಿ ಬಾಕಿಯನ್ನು ಏಕೆ ಕೇಳಲಿಲ್ಲ?, ಕರ್ನಾಟಕಕ್ಕೆ, ಕನ್ನಡಕ್ಕೆ ಅನ್ಯಾಯವಾದಾಗ ಏಕೆ ದನಿ ಎತ್ತಲಿಲ್ಲ?' ಎಂದು ಪ್ರಶ್ನಿಸಿದೆ.
'ಬಿಜೆಪಿ ನಾಯಕಿಯ ಮಗಳು ಜೀನ್ಸ್ ಧರಿಸಿ 'ಸಿಲ್ಲಿ ಸೋಲ್ಸ್ ಬೀಫ್ ಕೆಫೆ' ನಡೆಸಬಹುದು. ಬಿಜೆಪಿ ನಾಯಕರ ಮಕ್ಕಳು ಆಧುನಿಕ ಉಡುಗೆ ತೊಟ್ಟು ವಿದೇಶದಲ್ಲಿ ವ್ಯಾಸಂಗ, ವ್ಯವಹಾರ ಮಾಡಬಹುದು. ಮನುಸ್ಕೃತಿಯ ಸಂಸ್ಕೃತಿ ಎಲ್ಲವೂ ಬೇರೆಯವರ ಮನೆ ಮಕ್ಕಳಿಗೆ ಮಾತ್ರವೇ? ಮೊದಲು ಬಿಜೆಪಿ ನಾಯಕರ ಮಕ್ಕಳೆದುರು ಅನೈತಿಕ ಪೊಲೀಸ್ ಗಿರಿ ತೋರಿಸಲಿ' ಎಂದು ಕಾಂಗ್ರೆಸ್ ಸವಾಲು ಹಾಕಿದೆ.