ಭಾರತಮಾಲಾ, ದ್ವಾರಕಾ ಎಕ್ಸ್ಪ್ರೆಸ್, ಆಯುಷ್ಮಾನ್ ಭಾರತ್ ಯೋಜನೆಗಳಲ್ಲಿ ಹಗರಣ; ಸಿಎಜಿ ವರದಿಗೆ ಮೋದಿಯ ಮನ; ಕಾಂಗ್ರೆಸ್ ತರಾಟೆ
ಹೊಸದಿಲ್ಲಿ: ಭಾರತೀಯ ಜನತಾಪಕ್ಷದ ಆಳ್ವಿಕೆಯಲ್ಲಿ ಹಲವಾರು ಅಕ್ರಮಗಳು ನಡೆದಿವೆ ಯೆಂಬ ಭಾರತೀಯ ಮಹಾ ನಿಯಂತ್ರಕರು ಹಾಗೂ ಲೇಖಪಾಲರ (ಸಿಎಜಿ) ವರದಿಯ ಬಗ್ಗೆ ಗುರುವಾರ ಬೆಟ್ಟು ಮಾಡಿರುವ ಕಾಂಗ್ರೆಸ್ ಪಕ್ಷವು ಈ ಹಗರಣಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಗಾಢಮೌನವನ್ನು ಪ್ರಶ್ನಿಸಿದೆ.
ನೂರಾರು ಕೋಟಿ ರೂ. ಮೊತ್ತದ 7 ಹಗರಣಗಳಲ್ಲಿ ಮೋದಿ ಸರಕಾರವು ಶಾಮೀಲಾಗಿದೆಯೆಂದು ಪ್ರತಿಪಕ್ಷವು ಆಪಾದಿಸಿದೆ. ಭಾರತಮಾಲಾ ಯೋಜನೆ, ದ್ವಾರಕಾ ಎಕ್ಸ್ಪ್ರೆಸ್ ನಿರ್ಮಾಣ ಕಾಮಗಾರಿ, ಆಯುಷ್ಮಾನ್ ಭಾರತ್ ಯೋಜನೆಗಳಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ ಭಾರತೀಯ ಮಹಾ ನಿಯಂತ್ರಕರು ಹಾಗೂ ಲೇಖಪಾಲರು ತಮ್ಮ ವರದಿಗಳಲ್ಲಿ ಗಮನಸೆಳೆದಿದ್ದಾರೆ. ಅಯೋಧ್ಯಾ ಅಭಿವೃದ್ಧಿ ಯೋಜನೆಯಲ್ಲಿ ಗುತ್ತಿಗೆದಾರರು ಮಿತಿ ಮೀರಿ ಲಾಭಗಳಿಸಿರುವುದನ್ನು ಸಿಎಜಿ ವರದಿ ಪತ್ತೆ ಹಚ್ಚಿದೆ.
ಕೇಂದ್ರ ಸರಕಾರದ ಪ್ರಮುಖ ರಸ್ತೆ ಅಭಿವೃದ್ಧಿ ಕಾರ್ಯಕ್ರಮವಾದ ಭಾರತಮಾಲಾ ಯೋಜನೆಯ ಟೆಂಡರ್ ಪ್ರಕ್ರಿಯೆ ಕೂಡಾ ಲೋಪಭರಿತವಾಗಿದೆ ಎಂದು ಅವರು ಆಪಾದಿಸಿದ್ದಾರೆ.
ಭಾರತಮಾಲಾ ಯೋಜನೆಗೆ ಸಂಬಂಧಿಸಿ ವಿಕೃತವಾದ ಪ್ರಾಜೆಕ್ಟ್ ವರದಿ ಇನ್ನೂ ಸಲ್ಲಿಕೆಯಾಗಿಲ್ಲ. 3,500 ಕೋಟಿ ಮೊತ್ತದ ಹಣವನ್ನು ಎಸ್ಟೋ ಖಾತೆಯಿಂದ (ಇತರ ವ್ಯಕ್ತಿಯ ಅಥವಾ ಸಂಸ್ಥೆಯ ಬಳಿ ಇರಿಸಲಾಗುವ ಹಣ.ನಿರ್ದಿಷ್ಟ ಒಪ್ಪಂದ ಈಡೇರಿದ ಬಳಿಕವಷ್ಟೇ ಆ ಹಣವನ್ನು ಪಾವತಿಸಬೇಕಾದ ವ್ಯಕ್ತಿಗೆ ನೀಡಲಾಗುತ್ತದೆ) ವರ್ಗಾಯಿಸಲಾಗಿದೆ. ಇದಕ್ಕೂ ಹೆಚ್ಚಾಗಿ ಸುರಕ್ಷತಾ ಸಮಾಲೋಚಕರನ್ನು ನೇಮಿಸಲಾಗದೆ ಇರುವ ಬಗ್ಗೆಯೂ ಸಂಸ್ಥೆಯು ಬೆಟ್ಟು ಮಾಡಿ ತೋರಿಸಿದೆ.