ಅಂಕೋಲಾ: ನಮ್ಮ ಸಮಾವೇಶಗಳಲ್ಲಿ ಹೆಚ್ಚಿನದಾಗಿ ಮಹಿಳೆಯರೇ ಬರುತ್ತಿರುವುದನ್ನು ನೋಡಿದರೆ ಗ್ಯಾರಂಟಿಗಳು ಎಷ್ಟು ಜನಸಾಮಾನ್ಯರ ಮನ ಮುಟ್ಟಿದೆ ಎಂಬುದು ತೋರ್ಪಡುತ್ತಿದೆ ಎಂದು ಕೆನರಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಹೇಳಿದರು.
ತಾಲೂಕಾ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಅಂಬಾರಕೊಡ್ಲ ಜಿಲ್ಲಾಪಂಚಾಯತ್ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು ಹತ್ತು ವರ್ಷಗಳಲ್ಲಿ ಬಿಜೆಪಿಗರು ಕೇವಲ ಬೊಗಳೆ ಬಿಟ್ಟಿದ್ದಾರೆ ಹೊರತು ಹತ್ತು ರೂಪಾಯಿ ಕೆಲಸ ಮಾಡಿಲ್ಲ. ನನ್ನ ಮೇಲೆ ವಿಶ್ವಾಸ ಇಡೀ ನಾನು ಸಂಸದೆಯಾದ ಮೊಟ್ಟ ಮೊದಲವಾರದಲ್ಲೇ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಘೋಷಣೆ ಮಾಡುತ್ತೇನೆ ಇದು ನನ್ನ ಬಹುದಿನದ ಕನಸು. ಎಷ್ಟೇ ದೊಡ್ಡ ಸಮಸ್ಯೆ ಎದುರಾದರೂ ನಾನು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇನೆ.ನಿಮ್ಮ ಮನೆಮಗಳಾಗಿ ನಿಮ್ಮ ಸೇವೆಯನ್ನು ಮಾಡಲು ಬಂದಿದ್ದೀನಿ ನನ್ನನ್ನು ಆಶೀರ್ವದಿಸಿ ಎಂದರು.
ಶಾಸಕ ಸತೀಶ್ ಸೈಲ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳಿಂದ ಸ್ತ್ರೀಯರು ಸ್ವಾವಲಂಬಿಗಳಾಗಿದ್ದಾರೆ, ಬಡವರ ಪರ ಯೋಜನೆಗಳನ್ನು ತಂದು ಜನಪರ ಕಾಳಜಿಯುಳ್ಳ ಸರ್ಕಾರ ಎಂದರೆ ಕಾಂಗ್ರೆಸ್ ಹೊರತು ಸುಳ್ಳುಬುರುಕ ಬಿಜೆಪಿ ಪಕ್ಷ ಅಲ್ಲ,ಸುಳ್ಳಿನ ಸರದಾರರಾದ ಪಕ್ಷವಾದ ಬಿಜೆಪಿಗೆ ಮುಂಬರುವ ಲೋಕಸಭೆಯಲ್ಲಿ ಚುನಾವಣೆಯಲ್ಲಿ ಸೋಲಿಸಿ ಕಾಂಗ್ರೆಸ್ ಪಕ್ಷವನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೇಲುಗೈ ಸಾಧಿಸಿದ್ದೇವೆ ಲೋಕಸಭೆ ಚುನಾವಣೆಯಲ್ಲಿ ನಮ್ಮ ಗೆಲುವು ನಿಶ್ಚಿತ ಎಂದರು.
ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ರವೀಂದ್ರನಾಥ ನಾಯ್ಕ ಮಾತನಾಡಿ, ಕೇಂದ್ರ ಬಿಜೆಪಿ ಸರಕಾರ ಶ್ರೀಮಂತರ ಸರಕಾರ ಅದಾನಿ,ಅಂಬಾನಿಗಳ ಸರಕಾರ. ಬಿಜೆಪಿಗೆ ಚುನಾವಣೆಯಲ್ಲಿ ತಾವು ಮಾಡಿದ ಕೆಲಸದ ಮೇಲೆ ಮತ ಕೇಳುವ ಧೈರ್ಯವಿಲ್ಲ ಬದಲಾಗಿ ಧರ್ಮ, ಧರ್ಮಗಳ, ಜಾತಿ, ಜಾತಿಗಳ ಮದ್ಯೆ ಬಿರುಕುಮುಡಿಸಿ ಮತ ಕೇಳುತ್ತಿದೆ. ನಮ್ಮ ಗ್ಯಾರಂಟಿಗಳ ಬಗ್ಗೆ ಅಪಪ್ರಚಾರ ಮಾಡುತಿದ್ದ ಬಿಜೆಪಿ ನಮ್ಮ ಗ್ಯಾರಂಟಿ ಪದವನ್ನೇ ಕದ್ದು ತಮ್ಮ ಮುಖಕ್ಕೆ ಅಂಟಿಸಿಕೊಂಡಿದೆ. ವೈದ್ಯಯನ್ನು ನಮ್ಮ ಅಭ್ಯರ್ಥಿಯನ್ನಾಗಿಸಿರುವುದು ನಮ್ಮ ಹೆಮ್ಮೆಯ ವಿಷಯವಾಗಿದೆ,ಅವರನ್ನು ಗೆಲ್ಲಿಸಿ ಲೋಕಸಭೆಗೆ ಕಳುಹಿಸಿದರೆ ಉತ್ತರ ಕನ್ನಡ ಜಿಲ್ಲೆಯ ಸರ್ವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಾಯಿ ಗಾಂವ್ಕರ್, ಉಪಾಧ್ಯಕ್ಷ ರಾಮಾ ಮೊಗೇರ್, ಮಹಿಳಾ ಕಾಂಗ್ರೆಸ್ ಜಿಲ್ಲಾ ಅದ್ಯಕ್ಷೆ ಸುಜಾತಾ ಗಾಂವ್ಕರ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ರವೀಂದ್ರನಾಥ ನಾಯ್ಕ, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಾಂಡುರಂಗ ಗೌಡ ಹಾಗೂ ಪ್ರಮುಖರಾದ ಮಾಜಿ ಶಾಸಕ ಕೆ ಎಚ್ ಗೌಡ,ಪುರಸಭೆ ಸದಸ್ಯ ಪ್ರಕಾಶ ಗೌಡ ಹಾಗೂ ಮುಂತಾದವರು ಉಪಸ್ಥಿತರಿದ್ದರು.