ಬಿಜೆಪಿಯಿಂದ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪುಸ್ತಕ; ನ್ಯಾಯಾಲಯದ ತಡೆಯಾಜ್ಞೆ, ''ಸಿದ್ದು ನಿಜಕನಸುಗಳು' ಬಿಡುಗಡೆ ಕಾರ್ಯಕ್ರಮ ರದ್ದು
ಬೆಂಗಳೂರು: ನ್ಯಾಯಾಲಯದ ತಡೆಯಾಜ್ಞೆ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತಾದ 'ಸಿದ್ದು ನಿಜ ಕನಸುಗಳು ಪುಸ್ತಕ ಬಿಡುಗಡೆ ಕಾರ್ಯಕ್ರಮ ರದ್ದಾಗಿದೆ. ಈ ಪುಸ್ತಕವನ್ನು ಬಿಜೆಪಿ ಬಿಡುಗಡೆ ಮಾಡಲು ನಿರ್ಧಾರ ಮಾಡಿತ್ತು.
ಈ ಪುಸ್ತಕದಲ್ಲಿ ಅವಹೇಳನಕಾರಿ ಅಂಶಗಳು ಇವೆ ಎಂಬ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ಪುತ್ರ, ವರುಣಾ ಕ್ಷೇತ್ರದ ಶಾಸಕರೂ ಆಗಿರುವ ಯತೀಂದ್ರ ಸಿದ್ದರಾಮಯ್ಯ ನಗರದ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ವಕೀಲರ ವಾದವನ್ನು ಆಲಿಸಿ ಸೋಮವಾರ ಮಧ್ಯಾಹ್ನ 2:30ರ ಸುಮಾರಿಗೆ ಪುಸ್ತಕ ಬಿಡುಗಡೆ, ಮಾರಾಟ ಹಾಗೂ ಮಾಧ್ಯಮ ಪ್ರಸಾರಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಈ ನಿಟ್ಟಿನಲ್ಲಿ ಕಾರ್ಯಕ್ರಮ ರದ್ದುಗೊಳಿಸಲಾಗಿದೆ.
“ಸಿದ್ದು ನಿಜಕನಸುಗಳು ಎಂಬ ಪುಸ್ತಕದ ಮೂಲಕ ಹಲವು ಸೂಕ್ಷ್ಮ ವಿಷಯಗಳನು ಬಹಿರಂಗಪಡಿಸುವ ಜತೆಗೆ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕಿ ಕೊಡುವ ಪ್ರಯತ್ನವನ್ನು ಶ್ಲಾಘಿಸುತ್ತೇನೆ. ಈ ಪುಸ್ತಕದ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇನೆ. ನೀವು ಕೂಡ ಬನ್ನಿ' ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ರವಿವಾರ ಸಂಜೆಯ ವೇಳೆಗೆ ಆಹ್ವಾನ ಪತ್ರಿಕೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದರು.
ಸೋಮವಾರ ಮಧ್ಯಾಹ್ನ 3 ಗಂಟೆಗೆ ಪುರಭವನದಲ್ಲಿ ಬಿಡುಗಡೆಯಾಗುತ್ತಿರುವ ಸಿದ್ದು ನಿಜಕನಸುಗಳು ಸಂಪುಟ-1'ರ ಲೋಕಾರ್ಪಣೆ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಶ್ವತ್ಥನಾರಾಯಣ ವಹಿಸಲಿದ್ದಾರೆ ಎಂದು ಪ್ರಕಟಿಸಲಾಗಿತ್ತು. ಮುಖ್ಯ ಅತಿಥಿಯಾಗಿ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬರಹಗಾರ ರೋಹಿತ್ ಚಕ್ರತೀರ್ಥ, ಪತ್ರಕರ್ತ ಸಂತೋಷ್ ತಮ್ಮಯ್ಯ, ವಿಕ್ರಮ, ಸಂವಾದದ ಸಂಪಾದಕ ವೃಷಾಂಕ್ ಭಟ್ ಹಾಗೂ ಬರಹಗಾರ ರಾಕೇಶ್ ಶೆಟ್ಟಿ ಸಮಾರಂಭದಲ್ಲಿ ಭಾಗವಹಿಸುವುದು ಖಚಿತವಾಗಿತ್ತು.
ಆಹ್ವಾನ ಪತ್ರಿಕೆಯ ಅನುಸಾರ ಹೇಳುವುದಾದರೆ, ವಿಕೆಪಿ ಎನ್ನುವ ಅನಾಮಧೇಯ ವ್ಯಕ್ತಿ ಈ ವಿವಾದಾತ್ಮಕ ಪುಸ್ತಕವನ್ನು ಬರೆದಿದ್ದಾರೆ. ಇದು ಮೊದಲ ಸಂಪುಟವಾಗಿದ್ದು ಇನ್ನೂ ಹಲವು ಸಂಪುಟಗಳಲ್ಲಿ ಸಿದ್ದು ಅವರ ನಿಜಕನಸು'ಗಳನ್ನು ಬಿತ್ತರ ಮಾಡಲಿದ್ದೇವೆ ಎಂದು ಬಿಜೆಪಿ ಹೇಳಿಕೊಂಡಿತ್ತು.
ಕಾರ್ಯಕ್ರಮ ರದ್ದು ವಿಚಾರವಾಗಿ ಪುರಭವನದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ, ಸಿದ್ದರಾಮಯ್ಯಗೆ ಭಯ ಇದೆ. ತಾನು ಮಾಡಿದ ತಪ್ಪು ಈ ಪುಸ್ತಕದಲ್ಲಿ ಇದೆ ಎಂಬ ಕಾರಣಕ್ಕಾಗಿ ನ್ಯಾಯಾಲಯದ ತಡೆಯಾಜ್ಞೆ ತಂದಿದ್ದಾರೆ ಎಂದು ಆರೋಪಿಸಿದರು.
ರಾಜಕೀಯ ವಿಚಾರ ಬರೆಯುವಾಗ ಯಾರೂ ಯಾರನ್ನೂ ಕೇಳುವ ಹಾಗಿಲ್ಲ. ಎಲ್ಲರಿಗೂ ಹಕ್ಕು ಇವೆ. ಸಿದ್ದರಾಮಯ್ಯ ಜೀವನ ಚರಿತ್ರೆ ಬರೆದಿಲ್ಲ. ಅದಕ್ಕೆ ಅವರ ಅನುಮತಿ ಬೇಕು. ಇದು ರಾಜಕೀಯ ವಿಚಾರ. ಅವರನ್ನು ನಾವು ಗೌರವಿಸುತ್ತೇವೆ ಆದರೆ ಬೇರೆಯವರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ನಾಯಿಗೆ ಹೋಲಿಕೆ ಮಾಡುತ್ತಾರೆ. ಇದು ಸರಿಯಲ್ಲ ಎಂದರು.
ಪುಸ್ತಕದಲ್ಲಿ ಏನಿದೆ ಎಂಬುದು ಬಿಡುಗಡೆ ಆದ ಬಳಿಕ ಗೊತ್ತಾಗುತ್ತದೆ ಎಂದ ಅವರು, ಯಾವಾಗಬೇಕಾದರೂ ಬಿಡುಗಡೆ ಮಾಡಬಹುದು. ಆಹ್ವಾನ ಕೊಟ್ಟರೆ ಮತ್ತೆ ಕಾರ್ಯಕ್ರಮಕ್ಕೆ ಬರುತ್ತೇನೆ ಎಂದರು.