ಮುರ್ಡೇಶ್ವರದ ಕೆರೆಕಟ್ಟೆ ಶಾಲೆಯಲ್ಲಿ ಆರಂಭಗೊಂಡ “ಮಕ್ಕಳ ಸಾಹಿತ್ಯ ಸಂಭ್ರಮ”  

Source: SOnews | By Staff Correspondent | Published on 24th February 2024, 5:42 PM | Coastal News |

ಭಟ್ಕಳ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯತ ಉತ್ತರಕನ್ನಡ, ತಾಲೂಕಾ ಪಂಚಾಯತ ಭಟ್ಕಳ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಭಟ್ಕಳ ಹಾಗೂ ಮಾವಳ್ಳಿ-1, ಮಾವಳ್ಳಿ-2 ಮತ್ತು ಕಾಯ್ಕಿಣಿ ಪಂಚಾಯತ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕ ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 23-02-2024ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆರೆಕಟ್ಟೆಯಲ್ಲಿ ಭಟ್ಕಳ ತಾಲೂಕಾ ಮಟ್ಟದ “ಮಕ್ಕಳ ಸಾಹಿತ್ಯ ಸಂಭ್ರಮ” ಕಾರ್ಯಕ್ರಮ ವಿಧ್ಯುಕ್ತವಾಗಿ ಪ್ರಾರಂಭಗೊಂಡಿತು.
 
ಉದ್ಘಾಟಕರಾಗಿ ಆಗಮಿಸಿದ ಸಾಹಿತಿಗಳಾದ ಶಂಭು ಹೆಗಡೆಯವರು ಮಕ್ಕಳು ಮೊಬೈಲ್ ದೂರವಿರಿಸಿ ಪುಸ್ತಕಗಳ ಕಡೆ ಆಕರ್ಷಿಸಲು ಇಂತಹ ಚಟುವಟಿಕೆಗಳು ಪೂರಕವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿಗಳಾದ ವಿ.ಡಿ ಮೊಗೇರರವರು ಶಾಲಾ ಪುಸ್ತಕಗಳ ಪ್ರಾಮುಖ್ಯತೆಯಿಂದಾಗಿ ಗ್ರಂಥಾಲಯದಲ್ಲಿರುವ ಸಾವಿರಾರು ಪುಸ್ತಕಗಳ ಬಳಕೆ ಕಡಿಮೆಯಾಗುತ್ತಿದ್ದು ಈ ಕಾರ್ಯಕ್ರಮವು ಮಕ್ಕಳು ಗ್ರಂಥಾಲಯದ ಕಡೆಗೆ ಆಕರ್ಷಿತವಾಗಲು ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ತಿಳಿಸಿದರು. ಮಾವಳ್ಳಿ-2ರ ಗ್ರಾಮ ಪಂಚಾಯತ ಅಧ್ಯಕ್ಷರಾದ ನಾಗರತ್ನ ಪಡಿಯಾರರವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾದ ತಾಲೂಕ ಪಂಚಾಯತ ಸಹಾಯಕ ನಿರ್ದೇಶಕರಾದ ಉದಯ ಬೋರ್ಕರ್, ಗ್ರಾಮ ಪಂಚಾಯತ ಮಾವಳ್ಳಿ-2ರ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತ ಕಾಯ್ಕಿಣಿಯ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಪೂರ್ಣಿಮಾ ಮೊಗೇರ, ಶಿಕ್ಷಣ ಸಂಯೋಜಕರಾದ ಗೀತಾ ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷರಾದ ಉಲ್ಲಾಸ ನಾಯ್ಕ, ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಸಂಚಾಲಕರು, ಜಿಲ್ಲಾ ಸಂಚಾಲಕರು, ಕೆರೆಕಟ್ಟೆ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಾಘವೇಂದ್ರ ಗಾಯತೊಂಡೆ ಹಾಗೂ ಮುಖ್ಯ ಶಿಕ್ಷಕರಾದ ಸುರೇಖಾ ಭಂಡಾರಿಯವರು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ನಾಗೇಶ ಮಡಿವಾಳರವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು. ದಿನೇಶ ದೇಶಭಂಡಾರಿಯವರು ವಂದಿಸಿದರು.
 
ಉದ್ಘಾಟನಾ ಕಾರ್ಯಕ್ರಮದ ಮೊದಲು ವಿವಿಧ ಶಾಲೆಗಳಿಂದ ಆಗಮಿಸಿದ ಮಕ್ಕಳನ್ನು ಮುರ್ಡೇಶ್ವರದ ರಾಜಗೋಪುರದ ಎದುರಿನಿಂದ ಓಲಗ ಮಂಟಪದ ಮಾರ್ಗವಾಗಿ ಜಾಥಾದ ಮೂಲಕ ವೇದಿಕೆಗೆ ಕರೆತರಲಾಯಿತು. ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಮಕ್ಕಳು ನಾಟಕ ಆಡೋಣ, ಕಥೆ ಕಟ್ಟೋಣ, ಕವಿತೆ ಬರೆಯೋಣ ಹಾಗೂ ನಾನು ರಿಪೋರ್ಟರ್ ಮೂಲೆಗಳ ಮೂಲಕ ಭಾಷಾಕೌಶಲ, ಸಂವಹನ ಸಾಮರ್ಥ್ಯ ಗಟ್ಟಿಗೊಳಿಸಿಕೊಂಡು ಅಗತ್ಯವಿರುವ ಎಲ್ಲ ವಿಷಯಗಳ ಜ್ಞಾನವನ್ನು ವಿಸ್ತಿರಿಸಿಕೊಳ್ಳಲಿದೆ.

Read These Next