ಚಿಕ್ಕಮಗಳೂರು: ಕಾರು ಹಾಗೂ ಟಿಟಿ ವಾಹನವೊಂದು ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ 3 ವರ್ಷದ ಮಗು ಸಹಿತ ಇಬ್ಬರು ಮೃತಪಟ್ಟ ಘಟನೆ ಬೆಂಗಳೂರು - ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 206ರ ಕಡೂರು ತಾಲೂಕಿನ ಮತಿಘಟ್ಟ ಕ್ರಾಸ್ ಬಳಿ ಇಂದು ಮಧ್ಯಾಹ್ನ ಸಂಭವಿಸಿರುವುದು ವರದಿಯಾಗಿದೆ.
ಮೃತರನ್ನು ಹೊನ್ನಾವರ ಮೂಲದ ಗಿರಿಧರ್ (46) ಮತ್ತು ಮೂರು ವರ್ಷದ ಮಗು ಮಯಾಂಕ್ ಎಂದು ಗುರುತಿಲಾಗಿದೆ. ಇವರು ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಟಿಟಿಯಲ್ಲಿದ್ದ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ಸಾಗಿಸಲಾಗಿದೆ.
ಗಿರಿಧರ್ ಕುಟುಂಬ ಹೊನ್ನಾವರದಿಂದ ಕಾರಿನಲ್ಲಿ ಸಂಬಂಧಿಕರ ಮದುವೆಗೆ ತೆರಳುತ್ತಿದ್ದರೆನ್ನಲಾಗಿದೆ. ಟಿಟಿ ವಾಹನದಲ್ಲಿದ್ದವರು ಕೇರಳ ಮೂಲದ ಪ್ರವಾಸಿಗರಾಗಿದ್ದು, ಅವರು ಚಿಕ್ಕಮಗಳೂರಿಗೆ ಆಗಮಿಸುತ್ತಿದ್ದರೆನ್ನಲಾಗಿದೆ. ಈ ಎರಡು ವಾಹನಗಳು ಮತಿಘಟ್ಟ ಕ್ರಾಸ್ ಬಳಿ ಮುಖಾಮುಖಿ ಢಿಕ್ಕಿಯಾಗಿವೆ. ಅಪಘಾತದ ರಭಸಕ್ಕೆ ಟಿಟಿ ಉರುಳಿಬಿದ್ದ ಪರಿಣಾಮ ಅದರಲ್ಲಿದ್ದ ಏಳು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಕಾರಿನ ಒಂದ ಪಾರ್ಶ್ವ ಸಂಪೂರ್ಣ ಜಖಂಗೊಂಡಿದೆ.
ಈ ಬಗ್ಗೆ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.