ಕಾರವಾರ: ದುಡಿಯುವ ಕೈಗಳಿಗೆ ಕೆಲಸದೊಂದಿಗೆ ಸಮಾನ ಕೂಲಿ ಒದಗಿಸುವ ಉದ್ಯೋಗ ಖಾತರಿ ಯೋಜನೆಯ ಲಾಭವನ್ನು ಎಲ್ಲರೂ ಪಡೆಯಬೇಕು ಎಂದು ಬಂಡಲ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ ರುಕ್ಯಾ ಮರಾಠಿ ಹೇಳಿದರು.
ಅವರು ಇಂದು ಬಂಡಲ ಗ್ರಾಮ ಪಂಚಾಯಿತಿಯಲ್ಲಿ "ನರೇಗಾ ನಡಿಗೆ ಸುಸ್ಥಿರತೆಯೆಡೆಗೆ" ಅಭಿಯಾನ ಹಾಗೂ 2021-22ನೇ ಸಾಲಿನ ಹೆಚ್ಚುವರಿ ಬಸವ ವಸತಿ ಯೋಜನೆಯಡಿ ಆಯ್ಕೆಗೊಂಡ ಫಲಾನುಭವಿಗಳಿಗೆ ಏರ್ಪಡಿಸಿದ್ದ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಬಸವ ವಸತಿ ಯೋಜನೆಯಡಿ ಆಯ್ಕೆಗೊಂಡ ಫಲಾನುಭವಿಗಳು ಅಚ್ಚುಕಟ್ಟಾಗಿ ಮನೆ ನಿರ್ಮಿಸಿಕೊಳ್ಳುವಂತೆ ಸಲಹೆ ನೀಡಿದರು.
ಸಾಮಾಜಿಕ ಪರಿಶೋಧನೆಯ ತಾಲೂಕ ಕಾರ್ಯಕ್ರಮ ವ್ಯವಸ್ಥಾಪಕ ನಾಗರಾಜ ಹೆಗಡೆ , ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಸಿಗುವ ಕೂಲಿ ಮೊತ್ತ, ಇನ್ನಿತರ ಸೌಲಭ್ಯಗಳ ಕುರಿತು ತಿಳಿಸಿದರು.
ಐಇಸಿ ಸಂಯೋಜಕ ವಿಶ್ವಾಸ ಅಂಗಡಿ ಮಾತನಾಡಿ, ನರೇಗಾ ಯೋಜನೆಯಡಿ ಜನ ಕೈಗೊಳ್ಳಬಹುದಾದ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಮಾಹಿತಿ ನೀಡಿದರು. ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳ ಮಿತಿಯನ್ನು 2.5 ಲಕ್ಷದಿಂದ 5ಲಕ್ಷ ಕ್ಕೆ ಹೆಚ್ಚಿಸಲಾಗಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು.
ಈ ವೇಳೆ ಬಂಡಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಂಜುನಾಥ ರಾಮಗೌಡ, ಪಿಡಿಓ ಪ್ರದೀಪ ಅಂಕೋಲೆಕರ್, ಶಿರಸಿ ತಾಲೂಕ ಪಂಚಾಯಿತಿಯ ತಾಂತ್ರಿಕ ಸಹಾಯಕ ವಿನೋದ ಪಟಗಾರ, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಹಾಜರಿದ್ದರು.