ಮುಂಬೈ: ಮಹಾರಾಷ್ಟ್ರ ರಾಯಗಡದ ಕರಾವಳಿಯಲ್ಲಿ ಎಕೆ-47 ರೈಫಲ್ಗಳು ಹಾಗೂ ಮದ್ದು ಗುಂಡುಗಳು ಇದ್ದ ದೋಣಿಯೊಂದು ಗುರುವಾರ ಸಂದೇಹಾಸ್ಪದವಾಗಿ ಪತ್ತೆಯಾಗಿದ್ದು, ರಾಜ್ಯದಲ್ಲಿ ಭಯೋತ್ಪಾದನೆಯ ಭೀತಿ ಹುಟ್ಟಿಸಿದೆ.
ಈ ಹಾನಿಗೀಡಾದ ದೋಣಿ ಮುಂಬೈಯಿಂದ 190 ಕಿ.ಮೀ. ದೂರದಲ್ಲಿರುವ ರಾಯಗಡ ಜಿಲ್ಲೆಯ ಹರಿಹರೇಶ್ವರ ಕಡಲತೀರದ ಸಮೀಪ ಪತ್ತೆಯಾಗಿದೆ. ದೋಣಿಯಲ್ಲಿ ಮೂರು ಎಕೆ-47 ರೈಫಲ್, ಗುಂಡುಗಳು ಹಾಗೂ ದಾಖಲೆಗಳು ಕಂಡು ಬಂದಿವೆ.
ಸ್ಥಳೀಯ ಪೊಲೀಸ್ ಅಧಿಕಾರಿಗಳು ಹಾಗೂ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ ಹಾಗೂ ದೋಣಿ ಆಗಮಿಸಿದ ಮೂಲದ ಕುರಿತು ತನಿಖೆ ಆರಂಭಿಸಿದ್ದಾರೆ.
ದೋಣಿಯಲ್ಲಿ ಆಯುಧಗಳು ಪತ್ತೆಯಾಗಿ ರುವುದು ಭಯೋತ್ಪಾದನೆಯ ಭೀತಿ ಉಂಟು ಮಾಡಿದೆ. ರಾಯಗಡದ ಈ ಬೆಳವಣಿಗೆ ಬಗ್ಗೆ ಕೇಂದ್ರ ಗೃಹ ಸಚಿವಾಲಯ ನಿಗಾ ಇರಿಸಿದೆ. ಸ್ಥಳದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತಂಡವನ್ನು ಕೂಡ ನಿಯೋಜಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮೂರು ಎಕೆ-47 ಇದ್ದ ಲೇಡಿ ಹ್ಯಾನ್ ಎಂಬ ಹೆಸರಿನ ಈ ದೋಣಿ ಆಸ್ಟ್ರೇಲಿಯದ ಪ್ರಜೆ ಹಾನಾ ಲಾಂಡರ್ಗನ್ ಅವರಿಗೆ ಸೇರಿದ್ದು. ಅವರ ಪತಿ ಜೇಮ್ಸ್ ಹಾರ್ಬಟ್್ರ ಈ ದೋಣಿಯ ಕ್ಯಾಪ್ಟನ್. ಇಂಜಿನ್ನ ದೋಷದ ಹಿನ್ನೆಲೆಯಲ್ಲಿ ದಂಪತಿ ಈ ದೋಣಿಯನ್ನು ತ್ಯಜಿಸಿರಬೇಕು. ಮೇಲ್ನೋಟಕ್ಕೆ ಭಯೋತ್ಪಾದನೆಯ ಆಯಾಮ ಕಾಣುತ್ತಿಲ್ಲ. ಆದರೆ, ದೋಣಿಯಲ್ಲಿ ಆಯುಧಗಳನ್ನು ಯಾಕೆ ಸಾಗಿ ಸಲಾಗುತ್ತಿತ್ತು ಎಂಬುದು ಸ್ಪಷ್ಟವಾಗಿಲ್ಲ ಎಂದಿದ್ದಾರೆ. ತನಿಖೆ ನಡೆಯುತ್ತಿದೆ. ನಾವು ಈಗ ಯಾವುದೇ ಆಯಾಮವನ್ನು ತಳ್ಳಿ ಹಾಕುವಂತಿಲ್ಲ. ನಾನು ಕೇವಲ ಪ್ರಾಥಮಿಕ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇನೆ. ಆತಂಕಪಡುವ ಅಗತ್ಯ ಇಲ್ಲ ಎಂದು ಅವರು ಹೇಳಿದ್ದಾರೆ.
ನಾವು ಕೇಂದ್ರ ತನಿಖಾ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿ ಇದ್ದೇವೆ. ಅವರು ಈ ಮಾಹಿತಿಯನ್ನು ದೃಢಪಡಿಸಿದ್ದಾರೆ. ಈಗ ಸ್ಥಳೀಯ ಪೊಲೀಸರು ಹಾಗೂ ಭಯೋತ್ಪಾದನೆ ನಿಗ್ರಹ ದಳ ತನಿಖೆ ನಡೆಸುತ್ತಿದೆ ಎಂದು ಅವರು ತಿಳಿಸಿದ್ದಾರೆ.