ಭಟ್ಕಳ: ರಾಷ್ಟ್ರೀಯ ಮತದಾರರ ದಿನಾಚರಣೆ 2024ರ ಅಂಗವಾಗಿ ಕಾರವಾರ ಜಿಲ್ಲಾ ಪಂಚಾಯತ ಕಚೇರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸ್ವೀಪ್ (ಎಸ್ವಿಇಇಪಿ) ರಾಜ್ಯಮಟ್ಟದ ಭಿತ್ತಿಚಿತ್ರ ಸ್ಪರ್ಧೆಯಲ್ಲಿ ಭಟ್ಕಳ ಆನಂದಾಶ್ರಮ ಪಿಯು ಕಾಲೇಜು ವಿದ್ಯಾರ್ಥಿ ದರ್ಶನ ಮಹಾಬಲೇಶ್ವರ ನಾಯ್ಕ ಪ್ರಥಮ ಸ್ಥಾನ ಪಡೆದಿದ್ದಾನೆ.
14ನೇ ರಾಷ್ಟ್ರೀಯ ಮತದಾರ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಸರ್ ಪುಟ್ಟಣ್ಣ ಚಟ್ಟಿ ಪುರಭವನ ಟೌನ್ ಹಾಲ್ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ದರ್ಶನ ನಾಯ್ಕ ಅವರನ್ನು ಸನ್ಮಾನಿಸಲಾಗುತ್ತದೆ.
ವಿದ್ಯಾರ್ಥಿ ದರ್ಶನ ಕಳೆದ ನವೆಂಬರ್ನಲ್ಲಿ ಶಿರಾಲಿ ಜನತಾ ವಿದ್ಯಾಲಯದಲ್ಲಿ ನಡೆದ ತಾಲೂಕು ಮಟ್ಟದ ಹಾಗೂ ಡಿಸೆಂಬರ್ 9ರಂದು ಕಾರವಾರ ಸರಕಾರಿ ಪಿಯು ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದನು.
ಈತ ಅಂಜುಮನ್ ಕಾಲೇಜು ವತಿಯಿಂದ ನಡೆದ ಫುಜಿಯಾನ, ಸಿದ್ಧಾರ್ಥ ಪದವಿ ಕಾಲೇಜು ವತಿಯಿಂದ ನಡೆದ ಉಡಾನ್, ಶ್ರೀ ಗುರುಸುಧೀಂದ್ರ ಕಾಲೇಜು ವತಿಯಿಂದ ನಡೆದ ಸೃಷ್ಠಿ 2024 ಸ್ಪರ್ಧೆಗಳಲ್ಲಿಯೂ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾನೆ.