“ಪತ್ರಕರ್ತರು ಕೆಟ್ಟ ರಾಜಕಾರಣಿಗಳ ನಿರ್ಮೂಲನೆ ಮಾಡಬಲ್ಲರು” ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ ಸಮರ್ಪಣಾ ಕಾರ್ಯಕ್ರಮದಲ್ಲಿ ಮಾಂಕಾಳ್ ವೈದ್ಯ

Source: S O News | By I.G. Bhatkali | Published on 24th December 2023, 10:26 AM | Coastal News | Don't Miss |

ಭಟ್ಕಳ: ಪತ್ರಕರ್ತರು ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಮಾಡಬಲ್ಲರು ಹಾಗೆಯೆ ಕೆಟ್ಟ ರಾಜಕಾರಣಿಗಳನ್ನೂ ನಿರ್ಮೂಲನ ಮಾಡುವ ಶಕ್ತಿ ಪತ್ರಕರ್ತರಲ್ಲಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಾಂಕಾಳ್ ಎಸ್.ವೈದ್ಯ ಹೇಳಿದರು.

 

ಅವರು ಶನಿವಾರ ಸಂಜೆ ಇಲ್ಲಿನ ನಾಗಯಕ್ಷೆ ಸಭಾಭವನದಲ್ಲಿ ನಡೆದ ಪತ್ರಕರ್ತರ ಕ್ಷೇಮಾವೃದ್ಧಿ ಸಂಘದ ನಿಧಿ ಸಮರ್ಪಣೆ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದರು.

 

ಪತ್ರಕರ್ತರು ತಮ್ಮ ಜೀವನವನ್ನು ಅಭದ್ರತೆಯಲ್ಲಿ ಕಳೆಯುತ್ತಿದ್ದಾರೆ. ಕಷ್ಟದ ಸಮಯದಲ್ಲಿ ಸಹಾಯಕ್ಕೆಂದು ಪತ್ರಕರ್ತರ ಕ್ಷೇಮಾವೃದ್ಧಿ ನಿಧಿ ಸ್ಥಾಪಿಸಿದ್ದು ಒಂದು ಉತ್ತಮ ಬೆಳವಣೆಗೆಯಾಗಿದ್ದು ತಮ್ಮ ಬೆಂಬಲ ಸದಾ ಪತ್ರಕರ್ತರ ಹಿತಕಾಪಾಡುವಲ್ಲಿ ಇರುತ್ತದೆ ಎಂದ ಅವರು, ಪತ್ರಕರ್ತರು ನಮ್ಮ ತಪ್ಪುಗಳನ್ನು ತಿದ್ದುವುದರ ಮೂಲಕ ನಮ್ಮನ್ನು ಸರಿದಾರಿಗೆ ತರುವ ಕೆಲಸ ಮಾಡುತ್ತಾರೆ. ಸಮಾಜವನ್ನು ಕೆಡುಕುಗಳಿಂದ ಮುಕ್ತ ಮಾಡುವುದಷ್ಟೇ ಅಲ್ಲದೆ ಕೆಟ್ಟ ರಾಜಕಾರಣಿಗಳನ್ನು ಮನೆಯಲ್ಲಿ ಕುಳಿತುಕೊಳ್ಳುವಂತೆ ಮಾಡುತ್ತಾರೆ ಎಂದರು.

ಶ್ರೀ ನಾಗಯಕ್ಷೆ ಧರ್ಮಸಂಸ್ಥಾನದ ಧರ್ಮದರ್ಶಿ ರಾಮದಾಸ ಪ್ರಭು ಮಾತನಾಡಿದರು. ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಘದ ಗೌರವಾಧ್ಯಕ್ಷ ರಾಧಾಕೃಷ್ಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಉಪಾಧ್ಯಕ್ಷರಾದ ವಿಷ್ಣು ದೇವಡಿಗ,  ಮುಹಮ್ಮದ್ ರಝಾ ಮಾನ್ವಿ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಮನಮೋಹನ ನಾಯ್ಕ ಸ್ವಾಗತಿಸಿದರು. ಖಜಾಂಚಿ ಮೋಹನ ನಾಯ್ಕ ವಂದಿಸಿದರು. ಝೇಂಕಾರ ಮೆಲೋಡಿಸ್‌ನ ಪ್ರಸನ್ನ ಪ್ರಭು ಕಾರ್ಯಕ್ರಮ ನಿರೂಪಿಸಿದರು. ನಂತರ ಝೇಂಕಾರ ಮೆಲೋಡಿಸ್‌ ಸಂಸ್ಥೆಯಿಂದ ಸಂಗೀತ ರಸಮಂಜರಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

 

Read These Next