ಭಟ್ಕಳ ಬೆಳಕೆ ಹಲ್ಲೆ ಪ್ರಕರಣ: ಮತ್ತೆ ಇಬ್ಬರು ವಶಕ್ಕೆ; ಇನ್ನೋರ್ವನಿಗಾಗಿ ಮುಂದುವರೆದ ಶೋಧ
ಭಟ್ಕಳ: ಕಳೆದ ನ.18ರಂದು ತಾಲೂಕಿನ ಬೆಳಕೆಯಲ್ಲಿ ಆನ್ಲೈನ್ ಸುದ್ದಿವಾಹಿನಿಯ ವರದಿಗಾರ ಅರ್ಜುನ ಮಲ್ಯ ಮೇಲೆ ನಡೆದ ಭೀಕರ ಹಲ್ಲೆಗೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ಇಬ್ಬರನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.
ಬಂಧಿತ ಆರೋಪಿಗಳನ್ನು ತಾಲೂಕಿನ ಮುರುಡೇಶ್ವರ ಮೂಲದ ಭಾಸ್ಕರ ನಾಯ್ಕ (27) ಮತ್ತು ಮಂಜುನಾಥ ನಾಯ್ಕ (26) ಎಂದು ಗುರುತಿಸಲಾಗಿದೆ. ಈ ಇಬ್ಬರು ಬಂಧಿತ ಮಾದೇವ ನಾಯ್ಕ ಅವರೊಂದಿಗೆ ಓಡಾಡಿಕೊಂಡಿದ್ದವರು ಎನ್ನಲಾಗಿದ್ದು, ಇದೊಂದು ಸುಫಾರಿ ಹಲ್ಲೆ ಎನ್ನುವ ಶಂಕೆ ಬಲವಾಗಿದೆ.
ಇಸ್ಪೀಟ್ ಕ್ಲಬ್ಗೆ ಸಂಬಂಧಿಸಿದ ವರದಿಯೇ ಹಲ್ಲೆ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ಬಂಧಿತ ಮಾದೇವ ನಾಯ್ಕ ಸೂಚನೆಯ ಮೇರೆಗೆ ಭಾಸ್ಕರ ನಾಯ್ಕ ಹಾಗೂ ಮಂಜುನಾಥ ನಾಯ್ಕ ಈ ಕೃತ್ಯ ಎಸಗಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ.
ಅರ್ಜುನ ಮಲ್ಯ ಚಲನವಲನಗಳ ಬಗ್ಗೆ ಹಲ್ಲೆಕೋರರಿಗೆ ಮಾಹಿತಿ ರವಾನಿಸಿದ್ದ ವ್ಯಕ್ತಿ ನಾಪತ್ತೆಯಾಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಹಲ್ಲೆ ಘಟನೆ ನಡೆದ ದಿನ ಎದೆ ನೋವು ಎಂದು ಭಟ್ಕಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಮಾದೇವನ ಕಪಟ ನಾಟಕ ಪೊಲೀಸರು ಕಲೆ ಹಾಕಿರುವ ಮಾಹಿತಿಯಿಂದ ಬಯಲಾಗಿದೆ. ಹಲ್ಲೆಕೋರರಿಗೆ ಅರ್ಜನ ಮಲ್ಯನನ್ನು ಗುರುತು ಹಿಡಿಯಲು ಅನುಕೂಲವಾಗುವಂತೆ ಆತನ ಪೋಟೋ ಅನ್ನು ಇದೇ ಮಾದೇವ ನಾಯ್ಕ ವಾಟ್ಸಪ್ ಮೂಲಕ ಕಳುಹಿಸಿ ಕೊಟ್ಟಿರುವುದನ್ನು ಪೊಲೀಸರು ಪತ್ತೆ ಹಚ್ಚಿರುವ ಬಗ್ಗೆ ಮೂಲಗಳು ತಿಳಿಸಿವೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.