ಬಿಜೆಪಿ ಶಾಸಕನ ಕೊಲೆಗೆ ಸಂಚು: ಇಬ್ಬರ ಸೆರೆ
ಬೆಂಗಳೂರು: ಆಡಳಿತ ಪಕ್ಷದ ಮುಖ್ಯ ಸಚೇತಕ ಹಾಗೂ ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ಸಂಚು ನಡೆಸಿರುವ ಆರೋಪದಡಿ ಇಬ್ಬರನ್ನು ಬಂಧಿಸಿರುವ ಇಲ್ಲಿನ ಬೊಮ್ಮನಹಳ್ಳಿ ಠಾಣೆ ಪೊಲೀಸರು ವಿಚಾರಣೆ ಗೊಳಪಡಿಸಿದ್ದಾರೆ.
ಶಾಸಕ ಸತೀಶ್ ರೆಡ್ಡಿ ಆಪ್ತ ಸಹಾಯಕ ನೀಡಿದ ದೂರಿನನ್ವಯ ಎನ್ಸಿಆರ್ ದಾಖಲಿಸಿದ್ದ ಪೊಲೀಸರು,ಬಳಿಕ ನ್ಯಾಯಾಲಯದಿಂದ ಅನುಮತಿ ಪಡೆದು ಪ್ರಕರಣ ದಾಖಲಿಸಿ, ಬುಧವಾರ ಇಬ್ಬರನ್ನು ಬಂಧಿಸಿದ್ದಾರೆ. ಫೆ.3ರಂದು ಶಾಸಕರ ಸಂಬಂಧಿಗೆ ಕರೆ ಮಾಡಿದ್ದ ಬೊಮ್ಮನಹಳ್ಳಿಯ ಚಂದ್ರು ಎಂಬಾತ, ಸತೀಶ್ ರೆಡ್ಡಿ ಹತ್ಯೆಗೆ ಸಂಚು ನಡೆದಿದ್ದು, ಚಿತ್ರದುರ್ಗದ ಹೊಳಲ್ಕೆರೆಯ ಆಕಾಶ್ ಎಂಬಾತ ತನಗೆ ತಿಳಿಸಿದ್ದಾನೆ. ಶಾಸಕರ ಹತ್ಯೆಗೆ 2 ಕೋಟಿ ರೂ. ಸುಪಾರಿ ಸಹ ಪಡೆಯಲಾಗಿದೆ ಎಂದು ಉಲ್ಲೇಖಿಸಿದ್ದ ಎನ್ನಲಾಗಿದೆ.
ಈ ಸಂಬಂಧ ಸತೀಶ್ ರೆಡ್ಡಿಯ ಆಪ್ತ ಸಹಾಯಕ ಹರೀಶ್ ಬಾಬು ನೀಡಿದ ದೂರಿನ್ವಯ ಕಳೆದ ಹದಿನೈದು ದಿನದಿಂದ ಶಾಸಕರ ಮನೆಯ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆರೋಪದಡಿ ಇಬ್ಬರನ್ನು ಬಂಧಿಸಲಾಗಿದೆ. ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಸುಪಾರಿ ಪಡೆದಿರುವ ಆರೋಪವೂ ಕೇಳಿಬಂದಿದೆ.