ಭಟ್ಕಳ: ರಾಜ್ಯ ಸರಕಾರ ಭೂಸುಧಾರಣಾ ಕಾಯ್ದೆಗೆ ತಿದ್ದು ಪಡಿ ತಂದಿರುವುದನ್ನು ವಿರೋಧಿಸಿ ಭಟ್ಕಳ ಜೆ.ಡಿ.ಎಸ್. ಘಟಕದ ವತಿಯಿಂದ ಸಹಾಯಕ ಆಯುಕ್ತರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ರಾಜ್ಯ ಸರಕಾರ ಸುಗ್ರೀವಾಜ್ಞೆ ಮೂಲಕ ಭೂಸುಧಾರಣೆ ಕಾಯ್ದೆ, ಕೈಗಾರಿಕೆ, ಎಪಿಎಂಸಿ, ಕಾರ್ಮಿಕ ಕಾಯ್ದೆ ತಿದ್ದುಪಡಿಯನ್ನು ತಂದಿರುವುದು ಜನವಿರೋಧಿ ನೀತಿಯಾಗಿದ್ದು ತಕ್ಷಣ ಈ ತಿದ್ದುಪಡಿಯನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಲಾಗಿದೆ.
ಭೂಸುಧಾರಣೆ ಕಾಯ್ದೆ, ಕಾರ್ಮಿಕ ಕಾಯ್ದೆ ಮತ್ತು ಎಪಿಎಂಸಿ, ಕೈಗಾರಿಕೆ ಕಾಯ್ದೆಗಳ ತಿದ್ದುಪಡಿಯಿಂದ ರೈತರು, ಕಾರ್ಮಿಕರ ಹಿತಕ್ಕೆ ಧಕ್ಕೆಯಾಗಲಿದೆ. ಕಾಯ್ದೆಗಳ ತಿದ್ದುಪಡಿ ಮಾರಕವಾಗಿದ್ದು, ಹೀಗಾಗಿ ಈ ಕೂಡಲೇ ಕಾಯ್ದೆಗಳ ತಿದ್ದುಪಡಿ ಮಾಡಿರುವುದನ್ನು ವಾಪಾಸ್ ಪಡೆಯಬೇಕು. ಯಾವುದೇ ಕಾರಣಕ್ಕೂ ಇದನ್ನು ಜ್ಯಾರಿಯಾಗಲು ಬಿಡಬಾರದು ಎಂದು ಆಗ್ರಹಿಸಲಾಗಿದೆ. ಸಹಾಯಕ ಆಯುಕ್ತ ಭರತ್ ಎಸ್ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಮುಖಂಡರಾದ ಎಂ.ಡಿ. ನಾಯ್ಕ, ಕೃಷ್ಣಾನಂದ ಪೈ, ಜೈನುಲ್ಲಾಬಿದ್ದೀನ್ ಪಾರೂಕಿ, ದೇವಯ್ಯ ನಾಯ್ಕ, ಗಣೇಶ ಹಳ್ಳೇರ, ಮಂಜುನಾಥ ಗೊಂಡ ಮುಂತಾದವರಿದ್ದರು.