ಒಂದು ಸಿಟಿ ಸ್ಕ್ಯಾನ್ 300 ಚೆಸ್ಟ್ ಎಕ್ಸ್‌ರೇಗಳಿಗೆ ಸಮ; ಎಚ್ಚರಿಕೆ ನೀಡಿದ ಏಮ್ಸ್

Source: ಏಜೆನ್ಸೀಸ್ | Published on 4th May 2021, 2:06 PM | National News |

ನವದೆಹಲಿ: ಕೋವಿಡ್‌ ಪರಿಶೀಲನೆಯ ಆತಂಕದಲ್ಲಿ ಸಿಟಿ ಸ್ಕ್ಯಾನ್‌ ಕಡೆಗೆ ಜನರು ನುಗ್ಗುತ್ತಿರುವ ಬಗ್ಗೆ ಏಮ್ಸ್‌ ನಿರ್ದೇಶಕ ಡಾ.ರಣದೀಪ್‌ ಗುಲೇರಿಯಾ ಕಳವಳ ವ್ಯಕ್ತಪಡಿಸಿದ್ದಾರೆ. ಅತಿಯಾಗಿ ಸಿಟಿ ಸ್ಕ್ಯಾನ್‌ ಬಳಕೆಯಿಂದ ಕ್ಯಾನ್ಸರ್‌ ಆಹ್ವಾನಿಸಿದಂತಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ತೀವ್ರವಲ್ಲದ ಕೋವಿಡ್‌–19 ಪ್ರಕರಣಗಳಲ್ಲಿ ಸಿಟಿ ಸ್ಕ್ಯಾನ್‌ ಅವಶ್ಯಕತೆ ಇರುವುದಿಲ್ಲ ಎಂಬುದನ್ನು ಒತ್ತಿ ಹೇಳಿದ್ದಾರೆ. ಕೋವಿಡ್‌ ಪಾಸಿಟಿವ್‌ ಎಂದು ತಿಳಿಯುತ್ತಿದ್ದಂತೆ ತೀವ್ರವಲ್ಲದ ಲಕ್ಷಣಗಳು ಇರದಿದ್ದರೂ ಜನರು ಸ್ಕ್ಯಾನ್‌ಗೆ ಒಳಗಾಗುತ್ತಿರುವುದನ್ನು ಪ್ರಸ್ತಾಪಿಸಿದ್ದಾರೆ. ಅದರಿಂದ ದೇಹಕ್ಕೆ ಒಳ್ಳೆಯದಕ್ಕಿಂತಲೂ ಹೆಚ್ಚಿನ ಹಾನಿಯೇ ಸಂಭವಿಸುತ್ತದೆ ಹಾಗೂ ಅಡ್ಡ ಪರಿಣಾಮಗಳೂ ಉಂಟಾಗುತ್ತವೆ ಎಂದಿದ್ದಾರೆ.

'ಒಂದು ಸಿಟಿ ಸ್ಕ್ಯಾನ್‌ ಎದೆಗೆ ಮಾಡಿಸುವ 300ರಿಂದ 400 ಎಕ್ಸ್‌ರೇಗಳಿಗೆ ಸಮಾನ. ಅಧ್ಯಯಗಳ ಮಾಹಿತಿ ಪ್ರಕಾರ, ಕಡಿಮೆ ವಯಸ್ಸಿನವರು ಪದೇ ಪದೇ ಸಿಟಿ ಸ್ಕ್ಯಾನ್‌ಗೆ ಒಳಗಾಗುವುದರಿಂದ ಮುಂದಿನ ದಿನಗಳಲ್ಲಿ ಕ್ಯಾನ್ಸರ್‌ನ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ವಿಕಿರಣಗಳಿಗೆ ಒಡ್ಡುಕೊಳ್ಳುವುದರಿಂದ ಹಾನಿ ಉಂಟಾಗುತ್ತದೆ. ತೀವ್ರವಲ್ಲದ ಕೋವಿಡ್‌ ಪ್ರಕರಣಗಳಲ್ಲಿ ದೇಹದಲ್ಲಿ ಆಮ್ಲಜನಕದ ಪ್ರಮಾಣ ಸಹಜ ಸ್ಥಿತಿಯಲ್ಲಿದ್ದರೆ ಸಿಟಿ ಸ್ಕ್ಯಾನ್‌ ಮಾಡಿಸುವುದರಲ್ಲಿ ಅರ್ಥವಿಲ್ಲ' ಎಂದು ಗುಲೇರಿಯಾ ಹೇಳಿದ್ದಾರೆ.

ತೀವ್ರವಲ್ಲದ ಅನಾರೋಗ್ಯ ಮತ್ತು ರೋಗ ಲಕ್ಷಣಗಳು ಇಲ್ಲದ ಪ್ರಕರಣಗಳಲ್ಲಿಯೂ ಸಿಟಿ ಸ್ಕ್ಯಾನ್‌ನಲ್ಲಿ ಪ್ಯಾಚ್‌ (ಶ್ವಾಸಕೋಶದಲ್ಲಿ ಸೋಂಕಿನ ಗುರುತು) ಕಂಡುಬರಬಹುದು. ಚಿಕಿತ್ಸೆ ಇಲ್ಲದೆಯೂ ಅವು ಗುಣವಾಗುವ ಸಾಧ್ಯತೆ ಇರುತ್ತದೆ. ರೋಗದ ತೀವ್ರತೆ ಹೆಚ್ಚಿ ಆಸ್ಪತ್ರೆಗೆ ದಾಖಲಾಗಿದ್ದರೆ ಸ್ಕ್ಯಾನ್‌ ಮಾಡಿಸಬಹುದು. ಸೋಂಕಿನ ಅನುಮಾನಗಳಿದ್ದರೆ, ಎದೆಯ ಎಕ್ಸ್‌ರೇ ಮಾಡಿಸಬಹುದು ಎಂದು ಸಲಹೆ ನೀಡಿದ್ದಾರೆ.

'ಜ್ವರ ಮತ್ತು ರೋಗ ಲಕ್ಷಣಗಳು ಇರದ, ಆಮ್ಲಜನಕದ ಪ್ರಮಾಣ ಉತ್ತಮವಾಗಿರುವ ವ್ಯಕ್ತಿಗಳಿಗೆ ಹಲವು ರೀತಿಯ ರಕ್ತದ ಪರೀಕ್ಷೆಗಳನ್ನು ಮಾಡಿಸುವ ಅಗತ್ಯವೂ ಇರುವುದಿಲ್ಲ. ಇಂಥ ಪರೀಕ್ಷೆಗಳು ಆತಂಕ ಸೃಷ್ಟಿಸುತ್ತವೆ. ತೀವ್ರವಲ್ಲದ ರೋಗಿಗಳಿಗೆ ಹೆಚ್ಚಿನ ಔಷಧಗಳ ಅವಶ್ಯಕತೆಯೂ ಇರುವುದಿಲ್ಲ. ಹೆಚ್ಚು ಸ್ಟಿರಾಯ್ಡ್‌ ಸೇವನೆಯಿಂದ ವೈರಲ್‌ ನ್ಯುಮೋನಿಯಾಗೆ ಕಾರಣವಾಗಬಹುದು' ಎಂದು ಗುಲೇರಿಯಾ ಎಚ್ಚರಿಸಿದ್ದಾರೆ.

ಅತಿಯಾದ ಆಯಾಸ, ದೇಹದಲ್ಲಿ ಆಮ್ಲಜನಕದ ಪ್ರಮಾಣ ಇಳಿಮುಖವಾಗುವುದು (93ಕ್ಕಿಂತ ಕಡಿಮೆ), ಎದೆಯಲ್ಲಿ ನೋವು ಕಾಣಿಸಿಕೊಳ್ಳುವುದು ಆಸ್ಪತ್ರೆಯ ಅವಶ್ಯಕತೆಯನ್ನು ಸೂಚಿಸುತ್ತವೆ. ಹೋಂ ಕ್ವಾರಂಟೈನ್‌ನಲ್ಲಿ ಇರುವ ರೋಗಿಗಳು ವೈದ್ಯರೊಂದಿಗೆ ಸಂಪರ್ಕದಲ್ಲಿರಬೇಕು ಎಂದು ಸಲಹೆ ಕೊಟ್ಟಿದ್ದಾರೆ.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...