ಅಹ್ಮದಾಬಾದ್: 2002ರ ಗುಜರಾತ್ ಗಲಭೆಗೆ ಸಂಬಂಧಿಸಿ ಪುರಾವೆಗಳನ್ನು ತಿರುಚಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದ ಒಂದು ದಿನದ ಬಳಿಕ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಇಲ್ಲಿನ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ.
ಜೂನ್ 26ರಂದು ಬಂಧನವಾದ ಬಳಿಕ ಅವರನ್ನು ಸಬರ್ಮತಿ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ಸುಪ್ರೀಂ ಕೋರ್ಟ್ ಆದೇಶದಂತೆ ಜಾಮೀನು ಔಪಚಾರಿಕತೆಗಾಗಿ ಅವರನ್ನು ಸೆಷನ್ಸ್ ನ್ಯಾಯಾಧೀಶ ವಿ.ಎ. ರಾಣಾ ಅವರ ಮುಂದೆ ಹಾಜರುಪಡಿಸಲಾಗಿತ್ತು.
ಸುಪ್ರೀಂ ಕೋರ್ಟ್ ವಿಧಿಸಿದ ಷರತ್ತುಗಳೊಂದಿಗೆ ಸೆಷನ್ಸ್ ನ್ಯಾಯಾಲಯ ಇನ್ನೆರಡು ಷರತ್ತುಗಳನ್ನು ವಿಧಿಸಿದೆ. 25,000 ರೂ. ವೈಯಕ್ತಿಕ ಬಾಂಡ್ ಸಲ್ಲಿಸುವಂತೆ ಹಾಗೂ ಅನುಮತಿ ಇಲ್ಲದೆ ಭಾರತ ತ್ಯಜಿಸದಂತೆ ಅವರಿಗೆ ಸೂಚಿಸಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅಮಿತ್ ಪಟೇಲ್ ಅವರು ಹೇಳಿದ್ದಾರೆ.