ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ
ಧಾರವಾಡ : ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಅಧ್ಯಕ್ಷರಾಗಿರುವ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಹಾಗೂ ಧಾರವಾಡ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ಗುರುವಾರ ಬೆಳ್ಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಜರುಗಿತು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿಗಳು ಮಾತನಾಡಿ, ಈಗಾಗಲೇ ಮಹಾನಗರ ಪಾಲಿಕೆ, ಸ್ಮಾರ್ಟ್ಸಿಟಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಲೋಕೋಪಯೋಗಿ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಕಾಮಗಾರಿ ಅನುಷ್ಠಾನಗೊಳಿಸುವ ಅಧಿಕಾರಿಗಳು ಪರಸ್ಪರ ಸಂಪರ್ಕದಲ್ಲಿದ್ದು, ನಿಯಮಾನುಸಾರ ಕ್ರಮವಹಿಸಬೇಕು ಎಂದು ಹೇಳಿದರು.
ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಸದಸ್ಯ ಕಾರ್ಯದರ್ಶಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಡಾ.ಟಿ.ಎಸ್.ಮುರಳಿಧರ, ಹಿಂದಿನ ಸಭೆಯ ನಡುವಳಿಗಳನ್ನು ಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆದರು ಮತ್ತು ಪ್ರಸ್ತುತ ಕಾಮಗಾರಿಗಳ ಹಾಗೂ ರಸ್ತೆ ಸುರಕ್ಷತಾ ಕ್ರಮಗಳನ್ನು ವಿವರಿಸಿದರು.
ಧಾರವಾಡ ಪ್ರಾದೇಶಿಕ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಾದೇಶಿಕ ಸಾರಿಗೆ ಅಧಿಕಾರಿ ದಾಮೋದರ ಮಾತನಾಡಿ, ಆಟೋ ರಿಕ್ಷಾ ನಿಲ್ದಾಣಗಳ ನಿರ್ಮಾಣದ ಬಗ್ಗೆ ಹಾಗೂ ಆಟೋ ರಿಕ್ಷಾ ಮೀಟರಗಳ ಕ್ಯಾಲಿಬಿರೇಶನ್ ಪ್ರಗತಿಯಲ್ಲಿರುವ ಕುರಿತು ಸಭೆಯಲ್ಲಿ ತಿಳಿಸಿದರು.
ಉಪ ಪೊಲೀಸ್ ಆಯುಕ್ತ ಡಾ.ಗೋಪಾಲ ಬ್ಯಾಕೂಡ್ ಮಾತನಾಡಿ, ರಸ್ತೆ ಸುರಕ್ಷತಾ ಕ್ರಮಗಳ ಕುರಿತು ಜನಜಾಗೃತಿ ಹೆಚ್ಚಿಸುವ ಅಗತ್ಯವಿದೆ. ಶಾಲಾ ಶಿಕ್ಷಣ ಹಾಗೂ ಕಾಲೇಜು ಇಲಾಖೆ ಪ್ರತಿ ವಾರ ವಿದ್ಯಾರ್ಥಿಗಳನ್ನು, ಸ್ವಯಂ ಸೇವಕರನ್ನು ನೀಯೋಜಿಸಿದರೇ ಪೊಲೀಸ್ ಇಲಾಖೆಯಿಂದ ಸಂಚಾರ ನಿಯಮಗಳ ಹಾಗೂ ಸಂಚಾರ ನಿಯಂತ್ರಣದ ಬಗ್ಗೆ ಪ್ರಾಯೋಗಿಕ ತರಬೇತಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ಎಸ್.ಎಂ.ನಾಗರಾಜ, ಅಬಕಾರಿ ಪೊಲೀಸ್ ಆಯುಕ್ತ ಕೆ.ಪ್ರಶಾಂತಕುಮಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.