ಮುಂಬೈ: ಸಮುದ್ರದ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿರುವುದರಿಂದ ನರಿಮನ್ ಪಾಯಿಂಟ್ ಹಾಗೂ ರಾಜ್ಯ ಸೆಕ್ರೆಟರಿಯೇಟ್ ಸಹಿತ ದಕ್ಷಿಣ ಮುಂಬೈಯ ಪ್ರಮುಖ ಭಾಗಗಳು 2050ರ ಒಳಗೆ ಮುಳುಗಡೆಯಾಗಲಿವೆ ಎಂದು ಮುಂಬೈ ಮುನ್ಸಿಪಲ್ನ ಆಯುಕ್ತ ಇಕ್ವಾಲ್ ಸಿಂಗ್ ಚಹಾಲ್ ಹೇಳಿದ್ದಾರೆ.
ಇಲ್ಲಿ ಶನಿವಾರ ನಡೆದ ಮುಂಬೈ ಪರಿಸರ ಕ್ರಿಯಾ ಯೋಜನೆ ಹಾಗೂ ವೆಬ್ಸೈಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಚಹಾಲ್, ಹವಾಮಾನ ಬದಲಾವಣೆಯಿಂದ ದಕ್ಷಿಣ ಮುಂಬೈಯ ಎ, ಬಿ, ಸಿ ಹಾಗೂ ಡಿ ವಾರ್ಡ್ಗಳ ಶೇ. 70 ಭಾಗ ಮುಳುಗಡೆಯಾಗಲಿದೆ ಎಂದರು.
ಪ್ರಕೃತಿ ಎಚ್ಚರಿಕೆ ನೀಡಿದೆ. ಆದರೆ, ಜನರು ಎಚ್ಚೆತ್ತುಕೊಳ್ಳದೇ ಇದ್ದರೆ ಪರಿಸ್ಥಿತಿ ಅಪಾಯಕಾರಿಯಾಗಿ ಪರಿಣಮಿಸಲಿದೆ. ಕಫ್ ಪರೇಡ್, ನರಿಮನ್ ಪಾಯಿಂಟ್ ಹಾಗೂ ಮಂತ್ರಾಲಯದಂತಹ ಶೇ. 80ರಷ್ಟು ಪ್ರದೇಶಗಳು ಮುಳುಗಡೆಯಾಗಲಿದೆ ಎಂದು ಅವರು ಹೇಳಿದರು.
ಇದು ತುಂಬಾ ದೂರವಿಲ್ಲ. ಕೇವಲ 25ರಿಂದ 30 ವರ್ಷಗಳ ಒಳಗೆ, ಅಂದರೆ 2050ರ ಒಳಗೆ ಸಂಭವಿಸಲಿದೆ. ಇದರಿಂದ ಮುಂದಿನ ಪೀಳಿಗೆ ಮಾತ್ರವೇ ಅಲ್ಲದೆ, ಪ್ರಸಕ್ತ ಪೀಳಿಗೆ ಕೂಡ ತೊಂದರೆಗೀಡಾಗಲಿದೆ. ಈ ಹಿನ್ನೆಲೆಯಲ್ಲಿ ಹವಾಮಾನಕ್ರಿಯಾ ಯೋಜನೆಯನ್ನು ಸಿದ್ಧಪಡಿಸುತ್ತಿರುವ ದಕ್ಷಿಣ ಏಶ್ಯದ ಮೊದಲ ನಗರ ಮುಂಬೈ ಎಂದು ತಿಳಿಸಿದರು.
ಈ ಹಿಂದೆ ನಾವು ನೀರ್ಗಲ್ಲು ಕರಗುವಿಕೆಯಂತಹ ಹವಾಮಾನ ಬದಲಾವಣೆ ಕುರಿತ ಘಟನೆಗಳನ್ನು ಕೇಳಿದ್ದೇವೆ. ಆಗ ಅದು ನಮ್ಮ ಮೇಲೆ ನೇರವಾಗಿ ಪರಿಣಾಮ ಉಂಟು ಮಾಡಿರಲಿಲ್ಲ. ಆದರೆ, ಈಗ ಅದು ನಮ್ಮ ಮನೆ ಬಾಗಿಲಿಗೆ ಬಂದು ತಲುಪಿದೆ ಎಂದರು. 129 ವರ್ಷಗಳಲ್ಲೇ ಮೊದಲ ಬಾರಿಗೆ ಕಳೆದ ವರ್ಷ ಮುಂಬೈಗೆ ಚಂಡಮಾರುತ (ನಿಸರ್ಗ) ಅಪ್ಪಳಿಸಿತು ಹಾಗೂ 15 ತಿಂಗಳ ಬಳಿಕ ಮೂರು ಚಂಡ ಮಾರುತ ಅಪ್ಪಳಿಸಿತು. ಅನಂತರ 2020 ಆಗಸ್ಟ್ 5ರಂದು ನರಿಮನ್ ಪಾಯಿಂಟ್ನಲ್ಲಿ ನೀರಿನ ಮಟ್ಟ ಸುಮಾರು 5.5 ಅಡಿ ಏರಿಕೆಯಾಯಿತು ಎಂದು ಅವರು ಹೇಳಿದ್ದಾರೆ.