ಧಾರವಾಡ : ಕರ್ನಾಟಕ ಉಚ್ಛ ನ್ಯಾಯಾಲಯ, ಧಾರವಾಡ ಪೀಠದಲ್ಲಿ 77ನೇ ಸ್ವಾತಂತ್ಯ್ರೋತ್ಸವನ್ನು ಆಚರಿಸಲಾಯಿತು. ಹಿರಿಯ ನ್ಯಾಯಮೂರ್ತಿ ಶ್ರೀನಿವಾಸ ಹರೀಶಕುಮಾರ ರವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಎಲ್ಲರಿಗೂ ಶುಭಾಶಯಗಳನ್ನು ಕೋರಿ, ದೇಶದ ಸ್ವಾತಂತ್ಯ್ರಗೋಸ್ಕರ ಹೋರಾಡಿದ ರಾಣಿ ಚೆನ್ನಮ್ಮಾ, ಸಂಗೋಳ್ಳಿ ರಾಯಣ್ಣ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸರ್ದಾರ ವಲ್ಲಭಾಯಿ ಪಟೇಲ, ನೇತಾಜಿ ಸುಭಾಸ ಚಂದ್ರ ಬೋಸ್ ಮತ್ತು ಇತರರನ್ನು ಸ್ಮರಿಸಿದರು.
ಹಿರಿಯ ನ್ಯಾಯಮೂರ್ತಿಗಳು ಇತಿಹಾಸವನ್ನು ಉಲ್ಲೇಖಿಸುತ್ತಾ ನಾವು ಒಟ್ಟಾಗಿ ವಸುದೈವ ಕುಟುಂಬಕಂ ಧ್ಯೇಯವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಾಕಷ್ಟು ಅಭಿವೃದ್ಧಿ ಹಾಗೂ ಪ್ರಗತಿಯನ್ನು ಸಾಧಿಸಬಹುದು ಎಂದು ತಿಳಿಸಿದರು. ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕ ಮೌಲ್ಯಗಳಿಗೆ ಪ್ರಾಧಾನ್ಯತೆ ಕೊಡುವುದರಿಂದ ಸಾಮಾಜಿಕ ವ್ಯವಸ್ಥೆಯಲ್ಲಿ ಶಿಸ್ತನ್ನು ಕಾಯ್ದುಕೊಳ್ಳಲು ಸಾಧ್ಯ ಎಂದು ಹೇಳಿದರು. ಜನಸಂಖ್ಯೆ ಒಂದು ಶಾಪವೆಂದು ಪರಿಗಣಿಸದೆ ದುಡಿಯುವ ಕೈಗಳಿಗೆ ಉದ್ಯೋಗ ನೀಡಿದರೆ ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು. ಮಕ್ಕಳಲ್ಲಿ ದೇಶಪ್ರೇಮವನ್ನು ಮೂಡಿಸಲು ಕರೆ ಕೊಟ್ಟರು. ಭಾರತದ ಹಿರಿಮೆ ಗರಿಮೆಯನ್ನು ವಿಸ್ತರಿಸಿ ಭಾರತ ವಿಶ್ವಗುರು ಆಗಲು ಶ್ರಮಿಸುವಂತೆ ಸಂಕಲ್ಪ ತೊಡುವಂತೆ ಕರೆ ನೀಡಿದರು.
ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಸಚಿನ ಶಂಕರ ಮಗದುಮ, ನ್ಯಾಯಮೂರ್ತಿಗಳಾದ ಹಂಚಾಟೆ ಸಂಜೀವಕುಮಾರ, ಅನಂತ ರಾಮನಾಥ ಹೆಗಡೆ, ಸಿ.ಎಮ್.ಪೂನಚ್ಚ, ಜಿ.ಬಸವರಾಜ, ರಾಮಚಂದ್ರ ಡಿ.ಹುದ್ದಾರ, ಕೇಂದ್ರ ಸರ್ಕಾರದ ಸಾಲಿಸಿಟರ ಜನರಲ್, ರಾಜ್ಯ ಸರ್ಕಾರ ವಕೀಲರು ರಾಜ್ಯ ಪಬ್ಲಿಕ ಪ್ರಾಸಿಕ್ಯುಟರ, ಮತ್ತು ವಕೀಲರ ಸಂಘದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಕ ಮಹಾ ವಿಲೇಖಾನಾಧಿಕಾರಿ ರೋಣ ವಾಸುದೇವ, ಹಾಗೂ ಅಧಿಕ ಮಹಾ ವಿಲೇಖಾನಾಧಿಕಾರಿ (ನ್ಯಾಯಾಂಗ) ವೆಂಕಟೇಶ ಹುಲಗಿ ರವರು ಹಾಜರಿದ್ದರು.