ಉಡುಪಿ : ಕಳೆದ ಕೆಲ ದಿನಗಳಿಂದ ಉಡುಪಿಯಲ್ಲಿ ಸುರಿದ ಬಾರೀ ಮಳೆಯಿಂದಾಗಿ ಸುಮಾರು 290ಕೋಟಿ ರೂಪಾಯಿಗೂ ಅಧಿಕ ನಷ್ಟವಾಗಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ. ತುರ್ತು ಪರಿಹಾರಕ್ಕಾಗಿ 40 ಕೋಟಿ ರುಪಾಯಿ ಪರಿಹಾರಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ ಜಗದೀಶ ಮಾಹಿತಿ ನೀಡಿದ್ದಾರೆ.
ಪ್ರವಾಹದಿಂದ ಜಿಲ್ಲೆಯಾದ್ಯಂತ ನೂರಾರು ಮನೆಗಳು, ಸೇತುವೆ, ರಸ್ತೆ, ವಿದ್ಯುತ್ ವ್ಯವಸ್ಥೆ, ತೋಟಗಾರಿಕೆ, ಕೃಷಿ ಬೆಳೆಗಳು, ಅಂಗಡಿಮುಂಗಟ್ಟುಗಳು, ಹೆದ್ದಾರಿ ಸೇರಿದಂತೆ ಇತರ ಸೊತ್ತುಗಳಿಗೆ ಹಾನಿಯಾಗಿವೆ.
ಜಿಲ್ಲಾಡಳಿತ ನೀಡಿದ ಅಂಕಿಅಂಶಗಳ ಪ್ರಕಾರ ಸುಮಾರು 138 ಮನೆಗಳಿಗೆ ಹಾನಿಯಾಗಿದ್ದು ಒಂದು ಕೋಟಿ ರೂಪಾಯಿಗೂ ಅಧಿಕ ನಷ್ಟ ಉಂಟಾಗಿದೆ. ಕಾಪು ತಾಲೂಕಿನಲ್ಲಿ 28 ಮನೆಗಳಿಗೆ ಹಾನಿಯಾಗಿವೆ. ಇನ್ನೂ ಕಂದಾಯ ಇಲಾಖೆ ಸಿಬ್ಬಂದಿಗಳು ಆಯಾ ಪ್ರದೇಶಗಳಿಗೆ ತೆರಳಿ ಸಮೀಕ್ಷೆ ನಡೆಸುತ್ತಿದ್ದಾರೆ.
ಜಿಲ್ಲೆಯಿಂದ 38 ಹೆಕ್ಟೆರ್ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದ್ದು ಸುಮಾರು 39.32 ಲಕ್ಷ ರೂ. ಹಾನಿಯಾಗಿದೆ. 460 ಹೆಕ್ಟೇರ್ ಭತ್ತದ ಬೆಳೆಯುವ ಪ್ರದೇಶ ಪ್ರವಾಹದಿಂದ ಜಲಾವೃತಗೊಂಡಿದ್ದು ಸಮೀಕ್ಷೆ ನಡೆಸಲಾಗುತ್ತಿದೆ.
106 ವಿದ್ಯುತ್ ಕಂಬಗಳು, 10ವಿದ್ಯುತ್ ಪ್ರವಹಕಗಳು ಹಾಗೂ 3 ಕಿ.ಮೀವರೆಗಿನ ತಂತಿಗಳಿಗೆ ಹಾನಿಯಾಗಿ ಸುಮಾರು 25 ಲಕ್ಷ ನಷ್ಟ ಅಂದಾಜಿಸಲಾಗಿದೆ.
ನೆರೆ ಇಳಿದ ಬಳಿಕ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ವಹಿಸಿದೆ. ಅಲ್ಲಲ್ಲಿ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ.