ರಾಜ್ಯದಲ್ಲಿ ಶೇ.26ರಷ್ಟು ಮಳೆ ಕೊರತೆ; 134 ತಾಲೂಕುಗಳಲ್ಲಿ ಬೆಳೆ ಸಮೀಕ್ಷೆಗೆ ಸೂಚನೆ; ಕೃಷ್ಣಬೈರೇಗೌಡ
ಬೆಂಗಳೂರು: ರಾಜ್ಯದ ಅನೇಕ ಭಾಗಗಳಲ್ಲಿ ಬರದ ಪರಿಸ್ಥಿತಿ ತಲೆದೋರಿದೆ. ಈ ಹಿನ್ನೆಲೆಯಲ್ಲಿ 134 ತಾಲೂಕುಗಳಲ್ಲಿ ಬೆಳೆ ಸಮೀಕ್ಷೆ ನಡೆಸಿ, ಒಂದು ವಾರದೊಳಗೆ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ಸೋಮವಾರ ವಿಧಾನಸೌಧದಲ್ಲಿ ಪ್ರಕೃತಿ ವಿಕೋಪದಿಂದ ಉದ್ಭವಿಸಬಹುದಾದ ಪರಿಸ್ಥಿತಿ ಯನ್ನು ಪರಾಮರ್ಶಿಸಲು ರಚಿಸಲಾಗಿರುವ ಸಂಪುಟ ಉಪ ಸಮಿತಿ ಸಭೆಯ ಬಳಿಕ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಜೂನ್ ತಿಂಗಳಲ್ಲಿ ಶೇ.56ರಷ್ಟು ಕೊರತೆ, ಜುಲೈನಲ್ಲಿ ವಾಡಿಕೆಗಿಂತ ಶೇ.28ರಷ್ಟು ಹೆಚ್ಚು ಮಳೆಯಾಗಿತ್ತು. ಆಗಸ್ಟ್ನಲ್ಲಿ ವಾಡಿಕೆಗಿಂತ ಶೇ.73ರಷ್ಟುಮಳೆಕೊರತೆಯಾಗಿದೆ.ರಾಜ್ಯದಲ್ಲಿ ಒಟ್ಟಾರೆ ಶೇ.26ರಷ್ಟು ಮಳೆ ಕೊರತೆಯಾಗಿದೆ. ಆ.19ರಂತೆ 113 ತಾಲೂಕುಗಳಲ್ಲಿ ಕೇಂದ್ರ ಸರಕಾರದ ಮಾರ್ಗಸೂಚಿ ಅನ್ವಯ(ಕನಿಷ್ಠ ಶೇ.60ರಷ್ಟು ಮಳೆ ಕೊರತೆ, ಮೂರು ವಾರಗಳ ಶುಷ್ಕ ವಾತಾವರಣ ಇರಬೇಕು) ಬೆಳೆ ಸಮೀಕ್ಷೆ ಮಾಡಲು 10 ದಿನಗಳ ಅವಕಾಶ ನೀಡಿ ಸೂಚನೆ ನೀಡಲಾಗಿತ್ತು ಎಂದು ಅವರು ಹೇಳಿದರು. ಅದರಂತೆ, 113 ತಾಲೂಕುಗಳಲ್ಲಿ ಕೇಂದ್ರ ಸರಕಾರದ ಮಾನದಂಡಗಳ ಪ್ರಕಾರ ಸುಮಾರು 62 ತಾಲೂಕುಗಳು ಬರ ಘೋಷಣೆಗೆ ಅರ್ಹವಾಗಿವೆ. ಆದರೆ, ಜಂಟಿ ಸಮೀಕ್ಷೆ ನಂತರ ಬೆಳೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ ಎಂದು ಶಾಸಕರು, ಸಚಿವರು, ರೈತ ಸಂಘಟನೆಗಳು, ಅಧಿಕಾರಿಗಳಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಉಳಿದ 51 ತಾಲೂಕುಗಳಲ್ಲಿ ಮತ್ತೊಮ್ಮೆ ಬೆಳೆ ಸಮೀಕ್ಷೆ ಮಾಡಲು ತೀರ್ಮಾನಿಸಲಾಗಿದೆ ಎಂದು ಕೃಷ್ಣಬೈರೇಗೌಡ ತಿಳಿಸಿದರು.
ಈ 113 ತಾಲೂಕುಗಳು ಹೊರತುಪಡಿಸಿ ಸೆ.2ರಂತೆ ಇನ್ನೂ 83 ತಾಲೂಕುಗಳಲ್ಲಿ ಶುಷ್ಕ ವಾತಾವರಣ ಹಾಗೂ ಶೇ.60ರಷ್ಟು ಮಳೆ ಕೊರತೆಯಾಗಿದೆ. ಈ 83 ತಾಲೂಕುಗಳಲ್ಲಿಯೂ ಬೆಳೆ ಸಮೀಕ್ಷೆ ಮಾಡಲಾಗುವುದು. ಒಟ್ಟಾರೆ 134 ತಾಲೂಕುಗಳಲ್ಲಿ(51 ಹಾಗೂ 83) ಬೆಳೆ ಸಮೀಕ್ಷೆ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.