ಹೊಸದಿಲ್ಲಿ: ಇಂದು, ನಾಳೆ ಬ್ಯಾಂಕ್ ನೌಕರರ ಮುಷ್ಕರ
ಹೊಸದಿಲ್ಲಿ: ಎರಡು ಸರಕಾರಿ ಸ್ವಾಮ್ಯದ ಬ್ಯಾಂಕುಗಳ ಖಾಸಗೀಕರಣ ಪ್ರಸ್ತಾವವನ್ನು ವಿರೋಧಿಸಿ ಸಂಯುಕ್ತ ಬ್ಯಾಂಕ್ ಒಕ್ಕೂಟಗಳ ವೇದಿಕೆ (ಯುಎಫ್ಬಿಯು)ಯು ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿರುವುದರಿಂದ ಮಾ.15 ಮತ್ತು 16ರಂದು ದೇಶಾದ್ಯಂತ ಬ್ಯಾಂಕ್ಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯವುಂಟಾಗಬಹುದು.
ನೌಕರರ ಮುಷ್ಕರ:
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ.1ರಂದು ತನ್ನ ಮುಂಗಡಪತ್ರ ಭಾಷಣಣದಲ್ಲ ಸರಕಾರದ ಹೂಡಿಕೆ ಹಿಂದೆಗೆತ ಯೋಜನೆಯ ಭಾಗವಾಗಿ ಎರಡು ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳ ಖಾಸಗೀಕರಣವನ್ನು ಪ್ರಕಟಿಸಿದ್ದರು.
ಮುಷ್ಕರದ ಪರಿಣಾಮವಾಗಿ ಬ್ಯಾಂಕ್ ಶಾಖೆಗಳಲ್ಲಿ ಹಣವನ್ನು ಜಮೆ ಮಾಡುವ ಮತ್ತು ಹಿಂದೆಗೆದುಕೊಳ್ಳುವ, ಹೊಸ ಖಾತೆಗಳನ್ನು ಆರಂಭಿಸುವ, ಚೆಕ್ ಕ್ಲಿಯರೆನ್ಸ್ ಮತ್ತು ಸಾಲ ಮಂಜೂರಿಯಂತಹ ಸೇವೆಗಳಿಗೆ ವ್ಯತ್ಯಯವುಂಟಾಗಬಹುದು. ಆದರೆ ಎಟಿಎಂಗಳು ಎಂದಿನಂತೆ ಕಾರ್ಯ ನಿರ್ವಹಿಸಬಹುದು.
ಸುಮಾರು 10 ಲಕ್ಷ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳು ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ ಎಂದು ಯುಎಫ್ ಬಿಯು ಹೇಳಿಕೆಯಲ್ಲಿ ತಿಳಿಸಿದೆ.
ಮುಷ್ಕರ ನಡೆದರೆ ಶಾಖೆಗಳಲ್ಲಿ ಎಂದಿನ ಕಾರ್ಯಾಚರಣೆಗಳಿಗೆ ವ್ಯತ್ಯಯ ವುಂಟಾಗಬಹುದು ಎಂದು ಎಸ್ಬಿಐ ಸೇರಿದಂತೆ ಹೆಚ್ಚಿನ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ತಿಳಿಸಿವೆ. ಶಾಖೆಗಳು ಮತ್ತು ಕಚೇರಿಗಳಲ್ಲಿ ಸುಗಮ ಕಾರ್ಯನಿರ್ವಹಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿಯೂ ಬ್ಯಾಂಕುಗಳು ತಿಳಿಸಿವೆ.