ಅ.17ಕ್ಕೆ `ವಿಷನ್ 2025 ಡಾಕ್ಯುಮೆಂಟ್’ ಮಾಹಿತಿ ಸಂಗ್ರಹ ಕಾರ್ಯಾಗಾರ
ಕಾರವಾರ : ಮುಂದಿನ ಏಳು ವರ್ಷಗಳ ಅವಧಿಯಲ್ಲಿ ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿರಿಸಿಕೊಂಡು ರಾಜ್ಯ ಸರ್ಕಾರ ರೂಪಿಸಲು ಉದ್ದೇಶಿಸಿರುವ `ವಿಷನ್ 2025 ಡಾಕ್ಯುಮೆಂಟ್’ ಮಾಹಿತಿ ಸಂಗ್ರಹ ಕಾರ್ಯಾಗಾರ ಅ.17ರಂದು ಕಾರವಾರದ ರಂಗಮಂದಿದಲ್ಲಿ ನಡೆಯಲಿದೆ.
ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮಹತ್ವದ ಯೋಜನೆ ಇದಾಗಿದ್ದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ವಿಷನ್ 2025 ಡಾಕ್ಯುಮೆಂಟ್ ಯೋಜನೆ ಮುಖ್ಯ ಕಾರ್ಯನಿರ್ವಣಾಧಿಕಾರಿಯೂ ಆಗಿರುವ ರೇಣುಕಾ ಚಿದಂಬರಂ ನೇತೃತ್ವದ ತಂಡ ಜಿಲ್ಲೆಗೆ ಆಗಮಿಸಲಿದ್ದು ಡಾಕ್ಯೂಮೆಂಟ್ಗೆ ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಲಿದೆ.
ಸರ್ಕಾರದ ಪ್ರಮುಖ ಇಲಾಖೆಗಳನ್ನೊಳಗೊಂಡ 13 ವಲಯಗಳನ್ನು ಗುರುತಿಸಲಾಗಿದ್ದು ಅವುಗಳನ್ನು 5 ಸಮಾನಾಂತರ ವಿಷಯಗಳ ವರ್ಗಗಳಾಗಿ ವಿಂಗಡಿಸಲಾಗಿದೆ. 1. ನಗರ ಮೂಲಸೌಲಭ್ಯಾಭಿವೃದ್ಧಿ, ಸ್ಮಾರ್ಟ್ಸಿಟಿ, 2. ಸಾಮಾಜಿಕ ನ್ಯಾಯ, ಆರೋಗ್ಯ, ಶಿಕ್ಷಣ, 3. ಕೃಷಿ ಮತ್ತು ಅಲೈಡ್, ಗ್ರಾಮೀಣಾಭಿವೃದ್ಧಿ, 4. ಕೈಗಾರಿಕಾ ಅಭಿವೃದ್ಧಿ, ಸೇವೆಗಳು, ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ, ಮಾಹಿತಿ ಮತ್ತು ತಂತ್ರಜ್ಞಾನ ಹಾಗೂ 5. ಆಡಳಿತ, ಕಾನೂನು ಮತ್ತು ನ್ಯಾಯ. ಹೀಗೆ 5 ಸಮಾನಾಂತರ ವಿಷಯಗಳ ತಲಾ 20 ವಿಷಯತಜ್ಞರ ಗುಂಪುಗಳನ್ನು ರಚಿಸಿ ಆ ಗುಂಪುಗಳ ಆಂತರಿಕ ಚರ್ಚೆ ಬಳಿಕ ಪ್ರತಿ ಗುಂಪಿನಿಂದ ಆಯ್ದ ಒಬ್ಬ ಸದಸ್ಯರು ಮುನ್ನೋಟ ಮತ್ತು ಅಪೇಕ್ಷಿತ ಫಲಿತಾಂಶವನ್ನು ತಂಡದ ಮುಂದೆ ಪ್ರಸ್ತುತಪಡಿಸಲಿದೆ. ನಂತರ ಎಲ್ಲ ಗುಂಪುಗಳ ಅಂಶಗಳನ್ನು ಸಂಗ್ರಹಿಸುವ ತಂಡ ಅಂತಿಮವಾಗಿ ವಿಷನ್ 2025 ಡಾಕ್ಯುಮೆಂಟ್ನಲ್ಲಿ ಅಳವಡಿಸಲಿದೆ.
ಈ ಕಾರ್ಯಕ್ರಮ ರಾಜ್ಯದ ಅಭಿವೃದ್ಧಿ ಮುನ್ನೋಟದ ಹಿನ್ನೆಲೆಯಲ್ಲಿ ಅತ್ಯಂತ ಪ್ರಮುಖ ಕಾರ್ಯಕ್ರಮವಾಗಿರುವುದರಿಂದ ಪ್ರತಿ ಇಲಾಖಾವಾರು ವಿಷಯ ತಜ್ಞರು ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ ಸಾರ್ವಜನಿಕರೂ ಸಭೆಯಲ್ಲಿ ಭಾಗವಹಿಸಿ ರಾಜ್ಯದ ಅಭಿವೃದ್ಧಿ ಮುನ್ನೋಟಕ್ಕೆ ಸಲಹೆಗಳನ್ನು ನೀಡಬಹುದು.
ಅಕ್ಟೋಬರ್ 17ರಂದು ಬೆಳಿಗ್ಗೆ 10.30ಗಂಟೆಗೆ ರಂಗಮಂದಿರದಲ್ಲಿ ಕಾರ್ಯಾಗಾರ ಉದ್ಘಾಟನೆಗೊಂಡು ನಂತರ ವಿಷಯವಾರು ಐದು ಗುಂಪುಗಳನ್ನು ರಚಿಸಲಾಗುವುದು. ಆ ಗುಂಪುಗಳು ಸರ್ಕಾರಿ ಕಲಾ ಮತ್ತು ವಿಜ್ಞಾನ ಪದವಿ ಕಾಲೇಜಿನಲ್ಲಿ ಗುಂಪು ಚರ್ಚೆ ಬಳಿಕ ಅಂತಿಮವಾಗಿ ರಂಗಮಂದಿರದಲ್ಲಿ ತಮ್ಮ ಗುಂಪಿನ ಮುಖ್ಯಸ್ಥರು ತಮ್ಮ ಚರ್ಚೆಯ ಫಲಿತಾಂಶವನ್ನು ಸಮಿತಿಯ ಮುಂದೆ ಪ್ರಸ್ತುತಪಡಿಸಬೇಕು.
ಈ ಕಾರ್ಯಾಗಾರದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅಭಿವೃದ್ಧಿ ಮುನ್ನೋಟಕ್ಕೆ ಸಲಹೆ ಸೂಚನೆಗಳನ್ನು ನೀಡುವಂತೆ ಜಿಲ್ಲಾಡಳಿತ ತಿಳಿಸಿದೆ.