ಭಟ್ಕಳ: ಇಲ್ಲಿನ ಮುಠ್ಠಳ್ಳಿ-ಮೂಢಭಟ್ಕಳದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 25ನೇ ವರ್ಷದ ಹಿನ್ನೆಲೆ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ ಕುಮಾರ ಹೆಗಡೆ ಶುಕ್ರವಾರದಂದು ಭೇಟಿ ನೀಡಿದ್ದು ಪ್ರತಿಷ್ಠಾಪನೆಗೊಂಡ ಗಣೇಶನಿಗೆ ವಿಶೇಷ ಪೂಜೆಯನ್ನು ನೆರವೆರಿಸಿದರು.
ಸಚಿವ ಅನಂತಕುಮಾರ ಹೆಗಡೆ ಶುಕ್ರವಾರದಂದು ಮಧ್ಯಾಹ್ನದ ಮಹಾಮಂಗಳಾರತಿ ಪೂಜೆ ಸಲ್ಲಿಸಿ ದೇವರಲ್ಲಿ ವಿಶೇಷ ಸಂಕಲ್ಪಿತ ಪೂಜೆಯನ್ನು ಸಲ್ಲಿಸಿದರು. ಸಚಿವ ಅನಂತ ಕುಮಾರ ಹೆಗಡೆ ಪೂಜಾ ಸಂಕಲ್ಪದಲ್ಲಿ ಊರಿನವರ ಶ್ರಮಕ್ಕೆ ಶ್ರೀ ವಿಘ್ನೇಶ್ವರನು ಒಳ್ಳೆಯದನ್ನು ಮಾಡಲಿ ಹಾಗೂ ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬರಲಿ ಹಾಗೂ ಪಕ್ಷವೂ ಮತ್ತೊಮ್ಮೆ ಕರಾವಳಿಯಲ್ಲಿ ಸದೃಢವಾಗಿ ನೆಲೆನಿಂತು ಜನರ ಸೇವೆ ಮಾಡಲು ಅವಕಾಶಕಲ್ಪಿಸಿಕೊಡು ಎಂದು ಪ್ರಾರ್ಥಿಸಿಕೊಂಡರು.
ನಂತರ ವೇದಿಕೆ ಕಾರ್ಯಕ್ರಮದಲ್ಲಿ ಸಚಿವ ಹಾಗೂ ಸಂಸದ ಅನಂತ ಕುಮಾರ ಹೆಗಡೆ ಅವರಿಗೆ ಮುಠ್ಠಳ್ಳಿ-ಮೂಢಭಟ್ಕಳದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು '25 ವರ್ಷದಿಂದ ನಿರಂತರವಾಗಿ ಉತ್ಸವವನ್ನು ನಡೆಸಿಕೊಂಡು ಬರುತ್ತಿರುವುದು ಸಂತಸವಾಗಿದೆ. ಊರಿನಲ್ಲಿ ಇದೇ ರೀತಿ ಉತ್ಸವವೂ ವರ್ಷಗಳ ಕಾಲ ನಡೆಯುತ್ತಿರಲಿ ಆಮೂಲಕ ಸಾಮಾಜಿಕವಾಗಿ ಒಳ್ಳೆಯ ಕೆಲಸ ಕಾರ್ಯಗಳು ನಡೆಯಲಿ ಎಂದ ಅವರು ಊರಿನವರ ಅಭಿಮಾನ ಪ್ರೀತಿಗೆ ಧನ್ಯವಾದವನ್ನು ಅರ್ಪಿಸಿದರು.
ಈ ಸಂಧರ್ಭದಲ್ಲಿ ಶಾಸಕ ಸುನೀಲ ನಾಯ್ಕ, ಬಿಜೆಪಿ ತಾಲೂಕಾಧ್ಯಕ್ಷ ರಾಜೇಶ ನಾಯ್ಕ, ಬಿಜೆಪಿ ಹಿರಿಯ ಮುಖಂಡ ಉಮೇಶ ನಾಯ್ಕ, ಮುಠ್ಠಳ್ಳಿ-ಮೂಢಭಟ್ಕಳದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶನಿಯಾರ ನಾಯ್ಕ, ಕಾರ್ಯದರ್ಶಿ ವೆಂಕಟೇಶ ನಾಯ್ಕ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಈ ಸಂಧರ್ಬದಲ್ಲಿ ತಾಲೂಕಿನ ಸರ್ಪನಕಟ್ಟೆ, ಪುರವರ್ಗ, ಹೆಬಳೆ ಗಾಂಧಿನಗರ ಸೇರಿದಂತೆ ವಿವಿದೆಢೆ ಪ್ರತಿಷ್ಠಾಪಿಸಲ್ಪಟ್ಟ ಗಣಪನಿಗೆ ಸಚಿವ ಅನಂತ ಕುಮಾರ ಹೆಗಡೆ ಪೂಜೆ ಸಲ್ಲಿಸಿದರು.