ಭಟ್ಕಳ: ಶ್ರೀ ಮಾರುತಿ ಸಹಕಾರಿ ಪತ್ತಿನ ಸಂಘ ನಿ. ಶಿರಾಲಿ ಇದರ ಕುಮಟಾ ಶಾಖೆಯು ಗ್ರಾಹಕರ ಸಹಕಾರದೊಂದಿಗೆ ಈ ಬಾರಿ ಒಟ್ಟೂ 1.85ಕೋಟಿ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಅಶೋಕ ಪೈ ಹೇಳಿದರು.
ಅವರು ಇತ್ತಿಚೆಗೆ ಶ್ರೀ ಮಾರುತಿ ಸಹಕಾರಿ ಪತ್ತಿನ ಸಂಘ ನಿ. ಶಿರಾಲಿ ಇದರ ಕುಮಟಾ ಶಾಖೆಯಲ್ಲಿ ಜರಗಿದ ಗ್ರಾಹಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಹಕರ ಉತ್ತಮ ಸಹಕಾರದಿಂದ ಸಂಘವು ಈ ಬಾರಿ ಒಟ್ಟೂ 1 ಕೋಟಿ 85 ಲಕ್ಷ ಲಾಭಗಳಿಸಿ, 11.65 ಕೋಟಿ ಸಾಲ ನೀಡಿ ಸುಮಾರು 6 ಕೋಟಿ ಠೇವಣಿಯೊಂದಿಗೆ ಕುಮಟಾ ಶಾಖೆಯು 26.83 ಲಕ್ಷ ಲಾಭ ಗಳಿಸಿ ಪ್ರಗತಿಪಥದತ್ತ ದಾಪುಗಾಲು ಹಾಕಿದೆ ಎಂದರು.
ಹಿರಿಯ ನಿರ್ದೇಶಕರಾದ ವೆಂಕಟೇಶ ಪ್ರಭು ಮಾತನಾಡಿ, ಸತತ 4 ವರ್ಷಗಳಿಂದ 100% ಸಾಲ ವಸೂಲಾತಿ ಮಾಡಿ ಶಾಖೆಯ ಪ್ರಗತಿಗೆ ಕಾರಣೀಕರ್ತರಾದ ಶಾಖಾ ವ್ಯವಸ್ಥಾಪಕ ಪ್ರಸನ್ನ ಪ್ರಭು ಹಾಗೂ ಸಿಬ್ಬಂದಿಗಳಿಗೆ ಅಭಿನಂದಿಸಿದರು. ಗ್ರಾಹಕರಾದ ನಾರಾಯಣ ಪ್ರಭು ಮಾತನಾಡುತ್ತಾ ಠೇವಣಿಯ ಮೇಲಿನ ಬಡ್ಡಿದರವನ್ನು ಕಡಿಮೆ ಮಾಡುವಂತೆ ವಿನಂತಿಸಿ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನೊರ್ವ ಸದಸ್ಯರಾದ ಸತ್ಯೇಂದ್ರ ಪ್ರಭು ಮಾತನಾಡಿ ವಾಹನದಸಾಲದ ಬಡ್ಡಿದರವನ್ನು ಕಡಿಮೆ ಮಾಡುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ನೂರಾರು ಗ್ರಾಹಕರು ಹಾಗೂ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು. ಕುಮಟಾ ಶಾಖೆಯ ಪ್ರಬಂಧಕ ಪ್ರಸನ್ನ ಪ್ರಭು ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಾಜೇಂದ್ರ ಶಾನಭಾಗ ವಂದಾನಾರ್ಪಣೆ ಗೈಯ್ದರು.
ವೇದಿಕೆಯಲ್ಲಿ ನಿರ್ದೇಶಕರಾದ ಸುಬ್ರಾಯ ಕಾಮತ, ನರೇಂದ್ರ ನಾಯಕ, ಉಮೇಶ ಕಾಮತ, ಮಹಾಬಲೇಶ್ವರ ಶೇಟ್ ಮುಂತಾದವರು ಉಪಸ್ಥಿತರಿದ್ದರು.