ಬಿಜೆಪಿ ಅಭ್ಯರ್ಥಿಯಿಂದ ನಾಮಪತ್ರ ಸಲ್ಲಿಕೆ
ಭಟ್ಕಳ: 79ನೇ ಭಟ್ಕಳ ವಿಧಾನ ಸಭಾ ಚುನಾವಣೆ ಮೇ. 12ರಂದು ನಡೆಯಲಿದ್ದು ಸೋಮವಾರ ಬಿ.ಜೆ.ಪಿ. ಅಭ್ಯರ್ಥಿ ಸುನಿಲ್ ನಾಯ್ಕ ನಾಮಪತ್ರ ಸಲ್ಲಿಸಿದರು.
ಇದಕ್ಕೂ ಪೂರ್ವ ಇಲ್ಲಿನ ಚೆನ್ನಪಟ್ಟಣ ಹನುಮಂತ ದೇವಸ್ಥಾನದಲ್ಲಿ ಪೂಜೆ ನಂತರ ಇಲ್ಲಿನ ರಿಕ್ಷಾ ಚಾಲಕರ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರು ರಾಜ್ಯದಲ್ಲಿ ಬಿ.ಜೆ.ಪಿ. ಈ ಬಾರಿ ಸರಕಾರ ರಚನೆ ಮಾಡಲಿದ್ದು ಆ ಸಂದರ್ಭದಲ್ಲಿ ಬಿ.ಜೆ.ಪಿ. ಬಲಪಡಿಸಲು ಭಟ್ಕಳದ ಶಾಸಕರು ವಿಧಾನ ಸಭೆಯಲ್ಲಿರಬೇಕು. ಎಲ್ಲರೂ ಬಿ.ಜೆ.ಪಿಯನ್ನು ಬೆಂಬಲಿಸುವ ಮೂಲಕ ಸುನಿಲ್ ನಾಯ್ಕ ಅವರಿಗೆ ಮತ ಹಾಕುವಂತೆ ಕೋರಿದರು.
ಅಭ್ಯರ್ಥಿ ಸುನಿಲ್ ನಾಯ್ಕ ಮಾತನಾಡಿ ಭಟ್ಕಳ ವಿಧಾನ ಸಭಾ ಕ್ಷೇತ್ರಕ್ಕೆ ಬಿ.ಜೆ.ಪಿ. ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಿದ್ದೇನೆ. ಪಕ್ಷದ ಮುಖಂಡರು, ಕಾರ್ಯಕರ್ತರು ಎಲ್ಲರ ಸಹಕಾರದೊಂದಿಗೆ ಚುನಾವಣೆಯಲ್ಲಿ ಜಯ ಗಳಿಸುವ ವಿಶ್ವಾಸವಿದೆ. ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳಿದ್ದು ಅವುಗಳಿಗೆ ಶಾಶ್ವತ ಪರಿಹಾರ ಕಂಡು ಕೊಳ್ಳುವಲ್ಲಿ ಶ್ರಮಿಸುತ್ತೇನೆ ಎಂದು ಅಭ್ಯರ್ಥಿ ಸುನಿಲ್ ನಾಯ್ಕ ಹೇಳಿದರು.
ಈ ಸಂದರ್ಭದಲ್ಲಿ ಮಂಡಳ ಅಧ್ಯಕ್ಷ ರಾಜೇಶ ನಾಯ್ಕ, ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ಸೇರಿದಂತೆ ಸಾವಿರಾರು ಕಾರ್ಯಕರ್ತರು ಉಪಸ್ಥಿತರದ್ದರು.