ಸಂದಿಗ್ಧ ಸಮಯದಲ್ಲಿ ಹೇಗೆ ಬದುಕಬೇಕೆನ್ನುವದನ್ನು ಜೀವನ ನಮಗೆ ಕಲಿಸಿದೆ : ದಲೈಲಾಮಾ

Source: sonews | By Staff Correspondent | Published on 11th December 2017, 7:13 PM | Coastal News |

ಮುಂಡಗೋಡ: ಬೌದ್ಧ ಧರ್ಮ ಹಾಗೂ ಟಿಬೆಟ ಶಿಕ್ಷಣವನ್ನು ಜೀವಂತವಾಗಿಡುವಲ್ಲಿ ಸಫಲರಾಗಿದ್ದೇವೆ ಎಂದು ಟಿಬೇಟಿಯನ ಧರ್ಮಗುರು ದಲಾಯಿಲಾಮಾ ಹೇಳಿದರು.

ತಾಲೂಕಿನ ಟಿಬೆಟಿಯನ ಕಾಲೋನಿಯ ಲಾಮಾ ಕ್ಯಾಂಪ ನಂ.2ರ ಡ್ರೆಪುಂಗ್ ಲಾಚಿ ಬೌದ್ಧ ಮಂಧಿರದಲ್ಲಿ ಸೋಮವಾರ ಪೂಜೆ ಸಲ್ಲಿಸಿ, ಬೌದ್ಧ ಸನ್ಯಾಸಿಗಳಿಗೆ ಆಶೀರ್ವಚನ ನೀಡಿದರು.
ಬೌದ್ಧ ಧರ್ಮವು ಭಾರತದ ನಳಂದದಿಂದ ಉಗಮವಾಗಿ ಪೂರ್ತಿ ಏಷ್ಯ ಖಂಡದಲ್ಲಿ ವ್ಯಾಪಿಸಿತ್ತು. ಟಿಬೆಟ್‍ನಲ್ಲಿ ಬೌದ್ಧ ಧರ್ಮ ಪ್ರಚಲಿತಗೊಂಡು ವಿಕಾಸವಾಯಿತು. ಇಲ್ಲಿಗೆ ಬಂದು ಹಿರಿಯ ಬೌದ್ಧ ಮುಖಂಡರನ್ನು ಭೇಟಿಯಾಗಿರುವದು ಸುಮಾರು 80-90ವರ್ಷದ ಬೌದ್ಧ ಭಿಕ್ಕುಗಳನ್ನು ಕಂಡು ಸಂತಸವಾಗಿದೆ. 
20ನೇ ಶತಮಾನದ ಆರಂಭದಲ್ಲಿ ಟಿಬೆಟ್‍ನಲ್ಲಿ ಪರಿಸ್ಥಿತಿ ಹದಗೆಟ್ಟು ಸುಮಾರು ಒಂದು ಲಕ್ಷ ಟಿಬೆಟಿಯನರು ನಿರಾಶ್ರಿತರಾಗಿ ಭಾರತಕ್ಕೆ ವಲಸೆ ಬಂದರು. ಬೌದ್ಧ ಧರ್ಮ, ಸಂಸ್ಕøತಿಯ ರಕ್ಷಣೆಯ ಜೊತೆಗೆ ಬೌದ್ಧ ಶಿಕ್ಷಣವನ್ನು ಸುರಕ್ಷಿತವಾಗಿಡುವಲ್ಲಿ ಸಾಧ್ಯವಾಗಿದೆ. ಭಾರತದಲ್ಲಿ ಬಹುತೇಕ ಕಡೆ ಬೌದ್ಧ ಧರ್ಮದ ಸಂಸ್ಕತಿ ಯನ್ನು ಕಾಣಬಹುದಾಗಿದೆ ಎಂದರು. 
ಇಂದು ಕಾಲ ಬದಲಾಗಿದೆ ಧರ್ಮವನ್ನು ಕೇವಲ ತಿಳಿದುಕೊಂಡರೆ ಸಾಲದು ಅದನ್ನು ಅನ್ವಯ ಮಾಡಿಕೊಳ್ಳಬೇಕಾಗಿದೆ. ಇದರರ್ಥ ಕೇವಲ ಮಂತ್ರ ಜಪಿಸಿದರೆ ಸಾಲದು ಅದನ್ನು ಜೀವನದಲ್ಲಿ ಅನ್ವಯಿಸಿಕೊಳ್ಳಬೇಕು. ಟಿಬೆಟ್ ಸಂಘರ್ಷ ಹಿಂಸಾತ್ಮಕವಾಗಿದ್ದು ಅದನ್ನು ಕರುಣೆ, ಅಹಿಂಸಾ, ವಿಶ್ವಾಸದಿಂದ ಮಾತ್ರ ಬಗೆಹರಿಸಲು ಪ್ರಯತ್ನಿಸಬೇಕು. ಅಂದಾಗ ಮಾತ್ರ ಮಾನವ ಜಾತಿ ಉಳಿಯಲು ಸಾಧ್ಯ. 
ಗೆಲುಕ್ಪ ಪಂಗಡದ ಸಂಸ್ಥಾಪಕ ರಿನಪೋಚೆಯ ಮಹಾಪರಿನಿರ್ವಾಣ ದಿನವನ್ನು ಮಂಗಳವಾರ ಆಚರಿಸಲಾಗುವದು. ಕಷ್ಟದಲ್ಲಿದ್ದಾಗ ಎಲ್ಲವನ್ನು ಬಿಟ್ಟು ಭಾರತಕ್ಕೆ ಬಂದು ಬಹಳಷ್ಟು ಕಲಿತಿದ್ದೇವೆ. ಸಂಕಷ್ಟದ ಸಮಯವು ಟಿಬೆಟಿಯನರಿಗೆ ಒಂದು ಪಾಠವಾಗಿದೆ, ಸಂದಿಗ್ಧ ಸಮಯದಲ್ಲಿ ಹೇಗೆ ಬದುಕಬೇಕೆನ್ನುವದನ್ನು ಜೀವನ ನಮಗೆ ಕಲಿಸಿದೆ. ನಿರಾಶ್ರಿತರಾಗಿ ಬಂದ 55ವರ್ಷಗಳಲ್ಲಿ ಸಾಕಷ್ಟು ಕಲಿಯಲು ಸಾಧ್ಯವಾಗಿದೆ ಎಂದರು. 

ದಲೈಲಾಮಾರನ್ನು ಬರಮಾಡಿಕೊಂಡ ಜಿಲ್ಲಾಧಿಕಾರಿ
ಮುಂಡಗೋಡ: ಟಿಬೆಟಿಯನ ಧರ್ಮಗುರು ದಲಾಯಿಲಾಮಾ ಅವರನ್ನು ಜಿಲ್ಲಾಡಳಿತದ ವತಿಯಿಂದ ತಾಲೂಕಿನ ವಡಗಟ್ಟಾ ಚೆಕ್‍ಪೋಸ್ಟ್ ಹತ್ತಿರ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಬರಮಾಡಿಕೊಂಡರು

ಸೋಮವಾರ ಬೆಳಿಗ್ಗೆ 10ಗಂಟೆ ಸುಮಾರಿಗೆ ಆಗಮಿಸಿದ ಅವರನ್ನು ಜಿಲ್ಲಾಧಿಕಾರಿ ಸಹಿತ ಶಿರಸಿ ಎಸಿ ರಾಜು ಮೊಗವೀರ, ತಹಶೀಲ್ದಾರ ಅಶೊಕ ಗುರಾಣಿ, ಡಿವೈಎಸ್‍ಪಿ ನಾಗೆಶ ಶೆಟ್ಟಿ, ಸಿಪಿಐ ಕಿರಣಕುಮಾರ ನಾಯಕ ಹಲವು ಅಧಿಕಾರಿಗಳು ಸ್ವಾಗತಿಸಿದರು. ಟಿಬೆಟಿಯನ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದು ದಲಾಯಿಲಾಮಾ ಅವರನ್ನು ಸ್ವಾಗತಿಸಿದರು. ನಂತರ ಬಿಗಿ ಪೊಲೀಸ ಭದ್ರತೆಯಲ್ಲಿ ಮುಂಡಗೋಡ ಪಟ್ಟಣದ ಮೂಲಕ ಹಾಯ್ದು ಟಿಬೆಟಿಯನ ಕಾಲೋನಿಗೆ ದಲಾಯಿಲಾಮಾ ತೆರಳಿದರು.
 

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...