ಕೋಲಾರ, ಮಾರ್ಚ್ 27: ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ “ಜನಪರ-ಜನಪ್ರಿಯ” ಆಯವ್ಯಯ ಸಂಬಂಧಿಸಿದಂತೆ ಹಮ್ಮಿಕೊಳ್ಳಲಾಗಿದ್ದ ಪ್ರಚಾರ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ್ ಚಂದ್ರ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ ಅವರು ಸೋಮವಾರ ಚಾಲನೆ ನೀಡಿದರು.
ಹಸಿರು ನಿಶಾನೆ ತೋರುವ ಮೂಲಕ ಪ್ರಚಾರ ವಾಹನಕ್ಕೆ ಚಾಲನೆ ನೀಡಿದ ನಂತರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಹೊರ ತಂದಿರುವ ನುಡಿದಂತೆ ನಡೆದಿದ್ದೇವೆ ಎಂಬ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಯಿತು. ರಾಜ್ಯ ಸರ್ಕಾರವು ಇತ್ತೀಚೆಗೆ ಮಂಡನೆ ಮಾಡಿದ 2017-18 ನೇ ಸಾಲಿನ ಬಜೆಟ್ಗೆ ಸಂಬಂಧಿಸಿದಂತೆ ಪ್ರಚಾರವನ್ನು ನಡೆಸಲಾಗುವುದು.
ಜಿಲ್ಲೆಯಾಧ್ಯಂತ ಈ ಪ್ರಚಾರ ಕಾರ್ಯವನ್ನು 20 ದಿನಗಳ ಕಾಲ 40 ಹಳ್ಳಿಗಳಲ್ಲಿ ನಡೆಸಲಾಗುವುದು. ಸರ್ಕಾರವು ಬಜೆಟ್ನಲ್ಲಿ ಮಂಡಿಸಿರುವ ವಿಷಯಗಳ ಬಗ್ಗೆ ಪ್ರಚಾರದ ಮೂಲಕ ಗ್ರಾಮೀಣ ಜನತೆಗೆ ಅರಿವು ಮೂಡಿಸಲಾಗುವುದು. ಅಷ್ಟೇ ಅಲ್ಲದೆ ಸರ್ಕಾರವು ಜಾರಿಗೆ ತಂದಿರುವ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ, ವಸತಿ ಭಾಗ್ಯ, ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ಹೆಚ್ಚಳ, ಮೈತ್ರಿ, ಮನಸ್ವಿನಿ, ವಿದ್ಯಾಸಿರಿ ಸೇರಿದಂತೆ ಅನೇಕ ಜನಪ್ರಿಯ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನಿಡಲಾಗುವುದು.
ಹಸಿವು ಮುಕ್ತ ಕರ್ನಾಟಕಕ್ಕಾಗಿ ಸರ್ಕಾರವು ಪಣತೊಟ್ಟಿದ್ದು ಅನ್ನಭಾಗ್ಯ ಯೋಜನೆಯಡಿ 1 ಕೋಟಿ ಬಡ ಕುಟುಂಬಗಳಿಗೆ 3.8 ಕೋಟಿ ಜನರ ಹಸಿವು ನಿವಾರಣೆ ಮಾಡಿದೆ. ಅದರಂತೆ ಅಕ್ಕಿ ವಿತರಣೆಯನ್ನೂ ಸಹ ಹೆಚ್ಚಿಸಲಾಗಿದೆ. ಕ್ಷೀರ ಭಾಗ್ಯ ಯೋಜನೆಯನ್ನು ಶಾಲಾ ವಿದ್ಯಾರ್ಥಿಗಳಿಗೆ ವಾರಕ್ಕೆ 3 ದಿನಗಳ ಕಾಲ ನೀಡುತ್ತಿದ್ದು ಇದನ್ನು ಬಜೆಟ್ನಲ್ಲಿ ವಿಸ್ತರಿಸಲಾಗಿದೆ.
ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಟಾನದಲ್ಲಿ ಕರ್ನಾಟಕವು ದೇಶಕ್ಕೇ ಮೊದಲಾಗಿದೆ. ರೈತರ ಬೆಳೆಗೆ ಉತ್ತಮ ಬೆಲೆ-ಪಾರದರ್ಶಕ ವ್ಯವಹಾರಕ್ಕಾಗಿ ಆನ್ಲೈನ್ ಮಾರುಕಟ್ಟೆ ವ್ಯವಸ್ಥೆ ಮಾಡಲಾಗಿದೆ. ಅದರಂತೆ 156 ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಆನ್ಲೈನ್ ವಹಿವಾಟು ನಡೆಸಲಾಗುತ್ತಿದೆ.
ರಾಜ್ಯವು ಸುಮಾರು 26 ಲಕ್ಷ ಶೌಚಾಲಯ ನಿರ್ಮಿಸಿದ ಹಿರಿಮೆಯನ್ನು ಗಳಿಸಿದೆ. ಜೊತೆಗೆ ರಾಜ್ಯದ 1035 ಗ್ರಾಮ ಪಂಚಾಯಿತಿಗಳು ಬಯಲು ಬಹಿರ್ದೆಸೆ ಮುಕ್ತವಾಗಿದೆ. ಮೂರುವರೆ ವರ್ಷಗಳಲ್ಲಿ ದಾಖಲೆಯ 10.50 ಲಕ್ಷ ಮನೆ ನಿರ್ಮಾಣ ಮಾಡಲಾಗಿದೆ. ಅದರಂತೆ ಸರ್ಕಾರವ ವಿವಿಧ ಯೋಜನೆ, ಕಾರ್ಯಕ್ರಮಗಳ ಬಗ್ಗೆ ವ್ಯಾಪಕ ಪ್ರಚಾರವನ್ನು ನಡೆಸಲಾಗುವುದು.
ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಎಂ.ಜುಂಜುಣ್ಣ ಅವರು ಅತಿಥಿಗಳನ್ನು ಸ್ವಾಗತಿಸಿ, ಮಾಹಿತಿ ನೀಡಿದರು. ಎಸ್.ಆರ್.ರಾಖೇಶ್ ಇದ್ದರು.